ಶಿರಸಿ: ಅರಣ್ಯ ಇಲಾಖೆಯ ಜೀಪು ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಓಡಿಸುತ್ತಿದ್ದ ಗ್ರಾ ಪಂ ಸಿಬ್ಬಂದಿ ಮಂಜುನಾಥ ಮುಕ್ರಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಶಿರಸಿಯ ಝೂ ಸರ್ಕಲ್ ಬಳಿ ಶುಕ್ರವಾರ ಸಂಜೆ ಈ ಅಪಘಾತ ನಡೆದಿದೆ. ರಾಘವೇಂದ್ರ ಮಠ ರಸ್ತೆ ಕಡೆಯಿಂದ ಜೀಪು ಸಂಚರಿಸುತ್ತಿತ್ತು. ಆ ಭಾಗದಲ್ಲಿಯೇ ಬೈಕಿನಲ್ಲಿ ಸಂಚರಿಸುತ್ತಿದ್ದ ಬಾಳೆಗದ್ದೆಯ ಸಾಲ್ಕಣಿ ಗ್ರಾಮ ಪಂಚಾಯತ್ ಸಿಬ್ಬಂದಿ ಮಂಜುನಾಥ್ ಮುಕ್ರಿ ಅವರಿಗೆ ಜೀಪು ಗುದ್ದಿತು.
ಅಪಘಾತದ ರಭಸಕ್ಕೆ ಬೈಕು ಜೀಪಿನ ಅಡಿಗೆ ಬಿದ್ದಿದ್ದು, ಮಂಜುನಾಥ ಮುಕ್ರಿ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಅರಣ್ಯ ಇಲಾಖೆಯ ಜೀಪು ವೇಗವಾಗಿ ಬಂದು ಬೈಕಿಗೆ ಗುದ್ದಿತು ಎಂದು ಅಲ್ಲಿ ನೆರೆದಿದ್ದವರು ವಿವರಿಸಿದರು.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.




