ಯಲ್ಲಾಪುರ: ಮುದ್ದಾದ ಮಗಳ ಕಣ್ಮರೆಯಿಂದ ಮಾನಸಿಕವಾಗಿ ನೊಂದಿದ್ದ ಹುತ್ಕಂಡದ ಆರ್ ಎಸ್ ಭಟ್ಟ ಅವರ ಮೇಲೆ ಕರಡಿ ದಾಳಿ ನಡೆದಿದ್ದು, ದೈಹಿಕವಾಗಿಯೂ ಅವರು ನಿತ್ರಾಣಗೊಂಡಿದ್ದಾರೆ. ಪಿಎಲ್ಡಿ ಬ್ಯಾಂಕಿನ ಚುನಾವಣೆ ನಿಮಿತ್ತ ಓಡಾಡುತ್ತಿದ್ದ ಆರ್ ಎಸ್ ಭಟ್ಟರ ಮೇಲೆ ಶನಿವಾರ ಬೆಳಗ್ಗೆ ಮೂರು ಕರಡಿಗಳು ಆಕ್ರಮಣ ನಡೆಸಿವೆ. ಪರಿಣಾಮ ಅವರ ಕೈ-ಕಾಲು, ಮೈ-ಮುಖಗಳಿಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ.
ಯಲ್ಲಾಪುರದ ಚಂದ್ಗುಳಿ ಉಪಳೇಶ್ವರ ಹುತ್ಕಂಡ ಭಾಗದಲ್ಲಿ ಮೂರು ಕರಡಿಗಳು ಸಂಚರಿಸುತ್ತಿದ್ದು, ಬೆಳಗ್ಗೆ 7 ಗಂಟೆ ಅವಧಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಭಟ್ಟರನ್ನು ಅವು ಬೆನ್ನತ್ತಿದವು. ಮಾಯನಜಡ್ಡಿ ಮಾರ್ಗದ ಕಸ ವಿಲೇವಾರಿ ಘಟಕದ ಬಳಿ ಎರಡು ದೊಡ್ಡ ಕರಡಿ ಹಾಗೂ ಒಂದು ಮರಿ ನೋಡಿದ ಆರ್ ಎಸ್ ಭಟ್ಟರು ಬೈಕಿನ ವೇಗ ಹೆಚ್ಚಿಸಿದರು. ಅದಾಗಿಯೂ ಬೈಕಿನಿಂದ ಅವರನ್ನು ಬೀಳಿಸಿದ ಮೂರು ಕರಡಿಗಳು ಮೊದಲು ಕಾಲಿಗೆ ಕಚ್ಚ ಕಚ್ಚಿ ಆಕ್ರಮಣ ಮಾಡಿದವು. ನಂತರ ಬಟ್ಟೆ ಹರಿದು ಮೈ-ಕೈಗಳಿಗೆ ಕಚ್ಚಿ ಗಾಯಗೊಳಿಸಿದವು.
ಆರ್ ಎಸ್ ಭಟ್ಟ ಅವರ ಮುಖ, ಭುಜ ಹಾಗೂ ತೊಡೆ ಭಾಗಕ್ಕೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ. ನೆಲಕ್ಕೆ ಬಿದ್ದ ಅವರು ಸಾವರಿಸಿಕೊಂಡು ಮನೆ ಸೇರಿದ್ದು, ಕುಟುಂಬದವರು ಭಟ್ಟರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಯಿತು.
ಆರ್ ಎಸ್ ಭಟ್ಟ ಅವರು ಚಂದ್ಗುಳಿ ಗ್ರಾಮ ಪಂಚಾಯತ ಸದಸ್ಯರು. ಜೊತೆಗೆ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷ ಇದೇ ದಿನ ಅಂದರೆ ಡಿಸೆಂಬರ್ 21ರಂದು ಆರ್ ಎಸ್ ಭಟ್ಟ ಅವರ ಮಗಳು ತೇಜಾ ನಿಗೂಡವಾಗಿ ಕಾಣೆಯಾಗಿದ್ದರು. ಅವರು ಈವರೆಗೂ ಸಿಕ್ಕಿಲ್ಲ. ಮಗಳು ಕಾಣೆಯಾದ ಕಾರಣ ಕಳೆದ ಒಂದು ವರ್ಷದಿಂದ ಆರ್ ಎಸ್ ಭಟ್ಟ ಅವರು ಮಾನಸಿಕ ನೋವು ಅನುಭವಿಸುತ್ತಿದ್ದಾರೆ. ಇದೀಗ ಕರಡಿ ದಾಳಿಯಿಂದ ದೈಹಿಕವಾಗಿಯೂ ಅವರು ಕುಗ್ಗಿದ್ದು, ಕುಟುಂಬದವರು ದಿಕ್ಕೇ ತೋಚದಂತೆ ಮೌನವಾಗಿದ್ದಾರೆ.




