ಯಲ್ಲಾಪುರ: ಶಾಲಾ-ಕಾಲೇಜು ಮಕ್ಕಳು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆ ಪೊಲೀಸರು ನಿರಂತರವಾಗಿ ಶಾಲಾ-ಕಾಲೇಜಿಗೆ ಭೇಟಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಅಪರಾಧ ಮಾಸಾಚರಣೆ ಅಂಗವಾಗಿ ಮಂಚಿಕೇರಿ ಪೊಲೀಸರು ವಿವಿಧ ಅಪರಾಧ ಕೃತ್ಯ ತಡೆಯ ಬಗ್ಗೆ ಜನ ಜಾಗೃತಿ ನಡೆಸಿದ್ದಾರೆ.
ಗ್ರಾಮೀಣ ಭಾಗದ ಅನೇಕ ಶಾಲೆಗಳ ಆವರಣಗಳಿಗೆ ನುಗ್ಗುವ ವ್ಯಸನಿಗಳು ಶಾಲಾ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಮಂಚಿಕೇರಿ ಪೊಲೀಸರು ಅಂಥವರ ಮೇಲೆ ನಿಗಾ ಇರಿಸಿದ್ದು, ಶಾಲಾ-ಕಾಲೇಜು ಆವರಣದಲ್ಲಿ ಮಾಲಿನ್ಯವನ್ನು ತಡೆಯುತ್ತಿದ್ದಾರೆ. ಇದರೊಂದಿಗೆ ಅಪರಾಧ ತಡೆ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಿ, ಮಕ್ಕಳ ವಿದ್ಯಾರ್ಥಿಗಳ ಮೂಲಕ ಶಿಕ್ಷಕರು ಹಾಗೂ ಪಾಲಕರಿಗೂ ಅರಿವು ಮೂಡಿಸುತ್ತಿದ್ದಾರೆ.
ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಸಹ ಈ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮೊದಲು ಅವರ ಮನವೊಲೈಕೆ ಮಾಡಿ, ನಂತರ ದಂಡದ ಬಿಸಿ ತಾಗುವಂತೆ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸುವುದಕ್ಕಾಗಿ ಮನೆ ಮನೆ ಭೇಟಿ, ಮೆರವಣಿಗೆ, ಸೈಬರ್ ಅಪರಾಧ ತಡೆ ಜಾಗೃತಿ, ರಸ್ತೆ ಸುರಕ್ಷತೆ ಸೇರಿ ಹಲವು ವಿಷಯಗಳ ಬಗ್ಗೆ ಈ ತಿಂಗಳು ಕಾರ್ಯಕ್ರಮಗಳು ನಡೆದವು.
ಮಂಚಿಕೇರಿ ಪೊಲೀಸ್ ಹೊರ ಠಾಣೆಯ ಹವಾಲ್ದಾರರಾದ ದೀಪಕ ನಾಯ್ಕ, ಸಿಬ್ವಂದಿ ಪರಶುರಾಮ ದೊಡ್ಡಮನಿ ಈ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.




