ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಕರಡಿ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ವನ್ಯಜೀವಿ ಆಕ್ರಮಣ ಹಾಗೂ ಪರಿಹಾರದ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುತ್ತದೆ. ವನ್ಯಜೀವಿ ಆಕ್ರಮಣ ತಡೆ ಕುರಿತು ವೈಜ್ಞಾನಿಕ ಸಲಹೆ ನೀಡಲು ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ.
ಶನಿವಾರ ಬೆಳಗ್ಗೆ ಯಲ್ಲಾಪುರದ ಹುತ್ಕಂಡ ಬಳಿ ಗ್ರಾ ಪಂ ಸದಸ್ಯ ಆರ್ ಎಸ್ ಭಟ್ಟ ಅವರ ಮೇಲೆ ನಡೆದ ಆಕ್ರಮಣವನ್ನು ಸೇರಿ ಐದು ತಿಂಗಳ ಅವಧಿಯಲ್ಲಿ 8 ಕಡೆ ಕರಡಿ ದಾಳಿ ನಡೆದಿರುವ ಬಗ್ಗೆ S News ಡಿಜಿಟಲ್ ದಾಖಲೆಗಳ ಜೊತೆ ವರದಿ ಪ್ರಕಟಿಸಿದೆ. ಈ ವರದಿ ಪರಿಶೀಲಿಸಿದಾಗ ಯಲ್ಲಾಪುರ ಹಾಗೂ ಮುಂಡಗೋಡ ಭಾಗದಲ್ಲಿ ಹೆಚ್ಚಿನ ಜನ ಕರಡಿ ದಾಳಿಗೆ ಒಳಗಾಗಿರುವುದು ಅಂಕಿ-ಅoಶಗಳಿoದ ಗೊತ್ತಾಗಿದ್ದು, ಈ ಅವಧಿಯಲ್ಲಿ ಜೊಯಿಡಾದಲ್ಲಿ ಸಹ ಒಬ್ಬರ ಮೇಲೆ ಕರಡಿ ದಾಳಿ ನಡೆದಿದೆ. ಕರಡಿ ದಾಳಿ ತಡೆ ಅರಣ್ಯ ಇಲಾಖೆಗೆ ಸಹ ದೊಡ್ಡ ಸವಾಲಾಗಿದೆ.
ಈ ಬಗ್ಗೆ S News ಡಿಜಿಟಲ್ ಜೊತೆ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ `ಈವರೆಗಿನ ಘಟನಾವಳಿಗಳ ಅಧ್ಯಯನದ ಪ್ರಕಾರ ಬೆಳಗ್ಗೆ ಹಾಗೂ ಮುಸ್ಸಂಜೆ ಅವಧಿಯಲ್ಲಿಯೇ ಹೆಚ್ಚಾಗಿ ಕರಡಿ ದಾಳಿ ನಡೆದಿದೆ. ಹೀಗಾಗಿ ಅರಣ್ಯದಂಚಿನಲ್ಲಿ ವಾಸಿಸುವವರು ಈ ಅವಧಿಯಲ್ಲಿ ಮನೆಯಿಂದ ಹೊರ ಹೋಗದಿರುವುದು ಒಳಿತು’ ಎಂದು ಹೇಳಿದರು.
ಇದನ್ನೂ ಓದಿ: ಹುಲಿ ಕಾಡಿನಲ್ಲಿ ಕರಡಿ ಸಂಚಾರ: ಹುಲಿಗಿಂತ ಅಪಾಯ ಈ ಕರಡಿ!
`ಮರಿಗಳ ಜೊತೆ ಸಂಚರಿಸುತ್ತಿರುವ ಕರಡಿ ಆಕ್ರಮಣ ನಡೆಸುವ ಸಾಧ್ಯತೆ ಹೆಚ್ಚು. ಬೈಕ್ ಮೇಲೆ ತೆರಳುತ್ತಿದ್ದಾಗ ಕರಡಿ ದಾಳಿ ನಡೆಸಿದ್ದು ಅಪರೂಪದಲ್ಲಿಯೇ ಅಪರೂಪದ ಪ್ರಕರಣ. ವನ್ಯಜೀವಿ ದಾಳಿಗೆ ಒಳಗಾದವರಿಗೆ ಅರಣ್ಯ ಇಲಾಖೆ ಹಣಕಾಸಿನ ನೆರವು ನೀಡುತ್ತದೆ. ಆದರೆ, ಅದು ಶಾಶ್ವತ ಪರಿಹಾರವಲ್ಲ. ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆ ಬಗ್ಗೆ ಚರ್ಚಿಸಲು ಗ್ರಾಮ ಅರಣ್ಯ ಸಮಿತಿ ಮಟ್ಟದಲ್ಲಿಯೂ ಚರ್ಚೆ ನಡೆಸಲಾಗುತ್ತದೆ’ ಎಂದವರು ತಿಳಿಸಿದರು.
ಕರಡಿ ದಾಳಿ | ಗಾಯದ ಮೇಲೆ ಮತ್ತೊಂದು ಬರೆ.. ಆ ಘಟನೆ ನಡೆದಿದ್ದು ಇದೇ ದಿನ!
ಪರಿಹಾರ, ಸಲಹೆ-ಸೂಚನೆಗಳನ್ನು ನೀಡಲು ಪ್ರತಿಯೊಬ್ಬರಿಗೂ ಅವಕಾಶವಿದೆ. ವೈಜ್ಞಾನಿಕ ರೀತಿಯಲ್ಲಿ ವನ್ಯಜೀವಿ ಆಕ್ರಮಣ ತಡೆಗೆ ನಿಮ್ಮಲ್ಲಿರುವ ಯೋಜನೆಗಳ ಬಗ್ಗೆ ಇಲ್ಲಿ ಬರೆದು ಕಳುಹಿಸಿ..
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಕೆನರಾ ವೃತ್ತ, ಶಿರಸಿ – 581402
ಇಮೇಲ್: ccfkanaracircle@gmail.com
ಫೋನ್ ನಂ: 08384-236335




