ಹಳಿಯಾಳ: ಶಿವರಾಜ ಹಾಗೂ ಶಿವು ಎಂದು ಕರೆಯಿಸಿಕೊಳ್ಳುತ್ತಿದ್ದ ದೊಡ್ಡ ಕಳ್ಳನನ್ನು ಹಳಿಯಾಳ ಪೊಲೀಸರು ಉಪಾಯವಾಗಿ ಬಂಧಿಸಿದ್ದಾರೆ. ಈತ 78 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, 7 ವರ್ಷಗಳಿಂದ ಪೊಲೀಸರಿಗೆ ಕಾಡಿಸಿ-ಪೀಡಿಸುತ್ತಿದ್ದ. ಬುಧವಾರ ಆತನ ಸುಳಿವು ಆಧರಿಸಿ ದಾಳಿ ನಡೆಸಿದ ಪೊಲೀಸರು ಶಿವರಾಜನನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು.
ಕಳ್ಳತನ, ದರೋಡೆ, ಜನರನ್ನು ಬೆದರಿಸುವಿಕೆ ಸೇರಿ ಹಲವು ಬಗೆಯ ಆರೋಪಗಳು ಶಿವರಾಜ ಹಿರೇಮಠ ಮೇಲಿದೆ. 2017ರಲ್ಲಿ ಒಮ್ಮೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಶಿವು ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ತನ್ನ ದುಷ್ಕೃತ್ಯವನ್ನು ಆತ ನಿಲ್ಲಿಸಿರಲಿಲ್ಲ. ಆತನನ್ನು ಕೂಡಲೇ ಬಂಧಿಸಿ ಹಾಜರುಪಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.
ಹೀಗಾಗಿ ಪೊಲೀಸರು ಸಾಕಷ್ಟು ಕಡೆ ಹುಡುಕಾಟ ನಡೆಸಿದ್ದರು. ಆದರೆ, ಆತನ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸುವುದರೊಳಗೆ ಆತ ಅಲ್ಲಿಂದ ಕಣ್ಮರೆಯಾಗುತ್ತಿದ್ದ. ಹಲವು ಬಾರಿ ಈತ ಪೊಲೀಸ್ ದಾಳಿಯಿಂದ ತಪ್ಪಿಸಿಕೊಂಡಿದ್ದು, ಇದೀಗ ಸಿಪಿಆಯ್ ಜಯಪಾಲ ಪಾಟೀಲ ಆತನ ಬಂಧನಕ್ಕೆ ರಣತಂತ್ರ ರೂಪಿಸಿದ್ದರು.
ಪಿಎಸ್ಐ ವಿನೋದ ಎಸ್ ಕೆ, ಕೆ ಎನ್ ಅರಕೇರಿ ನೇತ್ರತ್ವದಲ್ಲಿ ಎಎಸ್ಐ ಸಂಜು ಅಣ್ಣಿಕೇರಿಯವರನ್ನು ಒಳಗೊಂಡು ತಂಡ ರಚಿಸಿದರು. ಪೊಲೀಸ್ ಸಿಬ್ಬಂದಿ ಭೀಮಣ್ಣ ಕೆ, ನಬೀಸಾಬ ಬೈರವಾಡಗಿ, ಸಂತೋಷ ಲಮಾಣಿ ಹಾಗೂ ರಾಘವೇಂದ್ರ ಕೆರೆವಾಡ ಕಾರ್ಯಾಚರಣೆ ನಡೆಸಿ ಶಿವಯ್ಯ ಹಿರೆಮಠ್’ರನ್ನು ಬಂಧಿಸಿದರು. ಆತನನ್ನು ಇದೀಗ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.





