ಶಿರಸಿ: ಅರಣ್ಯ ವಿದ್ಯಾಲಯ ಆವರಣದಲ್ಲಿ ನಡೆದ ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ 78 ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಮೂವರು 5 ಸಾವಿರ ರೂ ಹಣದ ಜೊತೆ ಮೊದಲ ಬಹುಮಾನ ಗೆದ್ದರು. ಸಿಹಿ ಖಾದ್ಯ ವಿಭಾಗದಲ್ಲಿ ಯಲ್ಲಾಪುರ ದೋಣಗಾರಿನ ಪ್ರೇಮಾ ಜೋಶಿ, ಖಾರ ಖಾದ್ಯ ವಿಭಾಗದಲ್ಲಿ ಶಿರಸಿ ಕಾನಗೋಡಿನ ಜಲಜಾಕ್ಷಿ ಹೆಗಡೆ ಹಾಗೂ ಮರೆತು ಹೋದ ಖಾದ್ಯ ವಿಭಾಗದಲ್ಲಿ ಸಿದ್ದಾಪುರ ಗೊದ್ಲಬಳದ ಆಶಾ ಹೆಗಡೆ ಮೊದಲ ಸ್ಥಾನ ಪಡೆದರು.
ಕೃಷಿ ಇಲಾಖೆಯವರು ಈ ಸ್ಪರ್ಧೆ ಆಯೋಜಿಸಿದ್ದು, ಎರಡನೇ ಬಹುಮಾನ ಪಡೆದವರಿಗೆ 3 ಸಾವಿರ ರೂ ಹಾಗೂ 3ನೇ ಬಹುಮಾನ ಪಡೆದವರಿಗೆ 2 ಸಾವಿರ ರೂ ನೀಡಿದೆ. ಸಿಹಿ ಖಾದ್ಯಕ್ಕಾಗಿ ಪ್ರೇಮಾ ಜೋಶಿ ಅವರು ತೊಡದೇವು ಮಾಡಿ ತಂದಿದ್ದರು. ಸಿದ್ದಾಪುರ ತ್ಯಾಗಲಿಯ ರೇಖಾ ಹೆಗಡೆ ಮಾಡಿದ ಮಿಲ್ಕ್ ಶೇಖ್ ಎರಡನೇ ಬಹುಮಾನ ಪಡೆಯಿತು. ಶಿರಸಿ ದೇವತೆಮನೆಯ ಸೀತಾ ಹೆಗಡೆ ಸುಳಿಗಡಬು ಮಾಡಿ ಮೂರನೇ ಬಹುಮಾನ ಪಡೆದರು. ಖಾರ ತಿನಿಸು ವಿಭಾಗದಲ್ಲಿ ಜಲಜಾಕ್ಷಿ ಹೆಗಡೆ ಅವರು ಫಲಾವ್ ಉಣಬಡಿಸಿ 5 ಸಾವಿರ ರೂ ಗೆದ್ದರು. ಕುಸುಮಾ ಹೆಗಡೆ ಅವರು ಸಿರಿಧಾನ್ಯದ ಕರೆ ಮಾಡಿ 3 ಸಾವಿರ ರೂ ಹಾಗೂ ಜೊಯಿಡಾ ಕುಂಬಾರವಾಡದ ಇಂದಿರಾ ಕಾಮತ್ ಉದ್ದಿನ ಕಟ್ಲೆಟ್ ಮಾಡಿ 2 ಸಾವಿರ ರೂ ಜೊತೆ ಮೂರನೇ ಬಹುಮಾನ ಪಡೆದರು.
ಇನ್ನೂ ಮರೆತು ಹೋದ ಖಾದ್ಯ ವಿಭಾಗದಲ್ಲಿ ಆಶಾ ಹೆಗಡೆ ಅಪರೂಪದ ಜಾನ್ ಸಕ್ಕರೆ ಮಾಡಿ ತಂದಿದ್ದರು. ಯಲ್ಲಾಪುರ ಉಮ್ಮಚ್ಗಿಯ ನಯನಾ ಹೆಗಡೆ ಬೆಲ್ಲದ ಚಾಕ್ಲೆಟ್ ಸಿದ್ದಪಡಿಸಿದ್ದರು. ಬನವಾಸಿಯ ಪುಷ್ಪ ಸಣ್ಣಲಿಂಗನವರ್ ಕುಂಬಳಕಾಯಿ ಖಾದ್ಯ ತಯಾರಿಸಿದ್ದರು. ಆಶಾ ಅವರು ಪ್ರಥಮ, ನಯನಾ ಅವರು ದ್ವಿತೀಯ, ಪುಷ್ಪ ಅವರು ಮೂರನೇ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಶಾಸಕ ಭೀಮಣ್ಣ ನಾಯ್ಕರ ಜೊತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವ್ಕರ್, ಉಪಕೃಷಿ ನಿರ್ದೇಶಕ ನಟರಾಜ್, ಪ್ರತಿಭಾ ಜಿ ಎಸ್, ಕೆವಿಕೆ ವಿಜ್ಞಾನಿ ರೂಪಾ ಪಾಟೀಲ, ಡಾ ಯಶಸ್ವಿನಿ, ಅರಣ್ಯ ವಿದ್ಯಾಲಯದ ಡಾ ಪ್ರಭುದೇವ ಮೊದಲಾದವರು ಖಾದ್ಯಗಳನ್ನು ಸವಿದು ಖುಷಿಪಟ್ಟರು.




