ಯಲ್ಲಾಪುರ: ಶಿರಸಿ-ಯಲ್ಲಾಪುರ ಮಾರ್ಗವಾಗಿ ವೇಗವಾಗಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಭಾರತಿಬಾಯಿ ಶಿರಟ್ಟಿ ಎಂಬಾತರಿಗೆ ಪೆಟ್ಟಾಗಿದೆ. `ಬಸ್ಸಿನ ಚಾಲಕ ರಾಮಚಂದ್ರ ನಾಯ್ಕ ಅವರ ಗಡಿಬಿಡಿಯೇ ಈ ಅವಘಡಕ್ಕೆ ಕಾರಣ’ ಎಂದು ವಿಜಯ ಭಾಗ್ವತ್ ಪೊಲೀಸ್ ದೂರು ನೀಡಿದ್ದಾರೆ.
ಹಳವಳ್ಳಿಯ ರಾಮಚಂದ್ರ ನಾಯ್ಕ ಕೆಎಸ್ಆರ್ಟಿಸಿ ಬಸ್ ಚಾಲಕ. ಡಿ 24ರಂದು ಅವರು ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಬಸ್ಸು ಓಡಿಸುತ್ತಿದ್ದರು. ಜಂಬೆಸಾಲ್ ಕ್ರಾಸ್ ಬಳಿ ಭಾರತಿಬಾಯಿ ಶರಟ್ಟಿ ಅವರು ಬಸ್ಸು ಹತ್ತಿದ್ದು, ಹಿಂದಿನ ಆಸನದಲ್ಲಿ ಅವರು ಕೂರುವ ಸಿದ್ಧತೆಯಲ್ಲಿರುವಾಗ ರಾಮಚಂದ್ರ ನಾಯ್ಕ ಬಸ್ಸಿನ ವೇಗ ಹೆಚ್ಚಿಸಿದರು.
ಅವರ ಅಡ್ಡಾದಿಡ್ಡಿ ಚಾಲನೆ ಹಾಗೂ ಗಡಿಬಿಡಿಯಿಂದಾಗಿ ಭಾರತಿಬಾಯಿ ಅವರು ಬಸ್ಸಿನಿಂದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡರು. ಭಾರತಿಬಾಯಿ ಅವರ ತಲೆ, ಹೊಟ್ಟೆ ಮೊಣಕಾಲಿಗೆ ಗಾಯವಾಗಿದ್ದರಿಂದ ರಕ್ತ ಸೋರುತ್ತಿತ್ತು. ಈ ಅವಘಡವನ್ನು ನೋಡಿದ ಮಲಳಗಾವ್ ಅಂಗನವಾಡಿ ಶಿಕ್ಷಕಿ ವಿಜಯ ಭಾಗ್ವತ್ ಚಾಲಕನ ದುಡುಕುತನದ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.





