ಕಾರವಾರ: ಸದಾಶಿವಗಡದ ಭಾರತ್ ಮೋಟರ್ಸ ವಿರುದ್ಧ ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪ ವ್ಯಕ್ತವಾಗಿದೆ. ಈ ಹಿನ್ನಲೆ ಸಂತ್ರಸ್ತೆ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ.
ಕಾರವಾರ ಬಾಡದ ಬಳಿಯ ಐಟಿಐ ಕಾಲೇಜು ಬಳಿ ಮನೆ ಮಾಡಿಕೊಂಡಿರುವ ಶೀಲಾ ನಾಯ್ಕ (61) ಅವರು ನಿವೃತ್ತ ಸರ್ಕಾರಿ ನೌಕರರು. 2013ರಲ್ಲಿ ಅವರು ಮಾರುತಿ ಸ್ವಿಪ್ಟ್ ಕಾರು ಖರೀದಿಸಿದ್ದರು. ಕಾರವಾರ ಆರ್ಟಿಓ ಕಚೇರಿಯಲ್ಲಿ ನೊಂದಾಯಿಸಿದ್ದರು. 2016ರಲ್ಲಿ ಆ ಕಾರು ಅಪಘಾತವಾಗಿ ಹೊಂಡಕ್ಕೆ ಬಿದ್ದಿತ್ತು. ಕಾರಿನ ವಿಮೆ ಹಣವನ್ನು ಪಡೆದ ಅವರು ವಾಹನದ ದುರಸ್ಥಿಗಾಗಿ ಸದಾಶಿವಗಡದ ಭಾರತ್ ಮೋಟಾರ್ಸ’ಗೆ ತಂದಿದ್ದರು.
ಆದರೆ, ಅಲ್ಲಿನ ಸಿಬ್ಬಂದಿ `ಕಾರು ರಿಪೇರಿ ಕಷ್ಟ. ಅದನ್ನು ಸ್ಕಾçಪ್ ಮಾಡುವೆ’ ಎಂದು ತಿಳಿಸಿದ್ದರು. ಶೀಲಾ ನಾಯ್ಕ ಅವರು ಕಾರನ್ನು ಗುಜುರಿಗೆ ಹಾಕಲು ಒಪ್ಪಿಗೆ ಸೂಚಿಸಿ ಅದನ್ನು ಭಾರತ್ ಮೋಟಾರ್ಸ ಅವರಿಗೆ ನೀಡಿದ್ದರು. ಆದರೆ, ಭಾರತ್ ಮೋಟಾರ್ಸ ಅವರು ಆ ಕಾರನ್ನು ಗುಜುರಿಗೆ ಹಾಕದೇ ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಶೀಲಾ ನಾಯ್ಕ ಅವರ ಅನುಮತಿ ಇಲ್ಲದೇ ವಾಹನ ಮಾರಿದ್ದರಿಂದ ದಾಖಲೆಗಳನ್ನು ಸಹ ಖರೀದಿದಾರರ ಹೆಸರಿಗೆ ವರ್ಗಾಯಿಸಿರಲಿಲ್ಲ. ಈ ಬಗ್ಗೆ ಈವರೆಗೂ ಶೀಲಾ ನಾಯ್ಕ ಅವರಿಗೆ ಮಾಹಿತಿಯೂ ಇರಲಿಲ್ಲ.
2024ರ ಸೆ 14ರಂದು ಬೆಂಗಳೂರು ಪೊಲೀಸರಿಂದ ಶೀಲಾ ನಾಯ್ಕ ಅವರಿಗೆ ನೋಟಿಸ್ ಬಂದಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣ 2 ಸಾವಿರ ರೂ ಹಣ ಪಾವತಿಸುವಂತೆ ಅದರಲ್ಲಿ ಸೂಚಿಸಿದ್ದು, ವಿಚಾರಿಸಿದಾಗ ಶೀಲಾ ನಾಯ್ಕ ಅವರು ಗುಜುರಿಗೆ ಹಾಕುವಂತೆ ಬಿಟ್ಟಿದ್ದ ಕಾರು ಬೇರೆಯವರ ಪಾಲಾಗಿದೆ. ತಮ್ಮ ಅನುಮತಿ ಇಲ್ಲದೇ ಸುಳ್ಳು ಹೇಳಿ ಕಾರು ಮಾರಿದ ಭಾರತ್ ಮೋಟಾರ್ಸ ವಿರುದ್ಧ ಶೀಲಾ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.




