ಶಿರಸಿ: ದೇವಾಲಯದಲ್ಲಿನ ಆರತಿ ತಟ್ಟೆಗೆ ಭಕ್ತರು ಹಾಕಿದ ಕಾಸು ಕದಿಯುತ್ತಿದ್ದ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಗುರುವಾರ ದೇವರ ಬಳಿ ತಪ್ಪೊಪ್ಪಿಗೆ ಕೇಳಿದ ಆತ ಕದ್ದ ಕಾಸನ್ನು ಹುಂಡಿಗೆ ಹಾಕಿ ಅಲ್ಲಿಂದ ತೆರಳಿದ್ದಾನೆ.
ಶಿರಸಿ ರಾಯರಪೇಟೆಯ ವೆಂಕಟ್ರಮಣ ದೇವಾಲಯ, ವಿಷ್ಣು ಮಠದಲ್ಲಿ ಪದೇ ಪದೇ ತಟ್ಟೆಕಾಸು ಕಣ್ಮರೆಯಾಗುತ್ತಿತ್ತು. ಮಂಗಳಾರತಿ ಮುಗಿಸಿದ ಅರ್ಚಕರು ಆ ಕಡೆ-ಈ ಕಡೆ ತಿರುಗುವಷ್ಟರಲ್ಲಿ ಆರತಿ ತಟ್ಟೆಯಲ್ಲಿದ್ದ ಕಾಸು ಕಾಣೆಯಾಗುತ್ತಿತ್ತು. ಆದರೆ, ಎಷ್ಟು ಜಾಣ್ಮೆವಹಿಸಿದರೂ ಕಳ್ಳ ಮಾತ್ರ ಪತ್ತೆ ಆಗಿರಲಿಲ್ಲ.
ಗುರುವಾರ ಸಹ ಆ ಕಳ್ಳನ ಆಗಮನವಾಗಿದ್ದು, ತಟ್ಟೆ ಕಾಸು ಎಗರಿಸುತ್ತಿದ್ದವನನ್ನು ಆಡಳಿತ ಮಂಡಳಿಯವರು ಪತ್ತೆ ಮಾಡಿದರು. ಈ ದಿನ ಆಡಳಿತ ಮಂಡಳಿಯವರು ಕಣ್ಣು ಬಿಡದೇ ಆರತಿ ತಟ್ಟೆ ನೋಡುತ್ತಿದ್ದರು. ಪುರೋಹಿತರು ಕಣ್ಣು ಮಿಟಿಕಿಸುವದರೊಳಗೆ ಕಳ್ಳ ಕಾಸು ಕದಿಯುತ್ತಿದ್ದದನ್ನು ಸಾಕ್ಷಿಸಹಿತ ಹಿಡಿದರು.
ಈ ವೇಳೆ ಆತ ನಿನ್ನೆ ಹಾಗೂ ಮೊನ್ನೆ ಕಾಸು ಕದ್ದಿದನ್ನು ಒಪ್ಪಿಕೊಂಡಿದ್ದಾನೆ. ಒಮ್ಮೆ 600ರೂ, ನಂತರ 700ರೂ, ಅದಾದ ಮೇಲೆ 100ರೂ ಕದ್ದಿರುವುದಾಗಿ ಆತ ಹೇಳಿದ್ದಾನೆ. ಕದ್ದ ಕಾಸಿನ ಲೆಕ್ಕ ಸರಿಯಾಗಿ ಹೇಳದೇ ಇದ್ದರೂ ಕೈಯಲಿದ್ದ ಕಾಸನ್ನು ಮರಳಿ ಆರತಿ ತಟ್ಟೆಗೆ ಹಾಕಿದ್ದಾನೆ.
ಕಾಸು ಮರಳಿಸುವ ಮುನ್ನ ಹಾಗೂ ಮರಳಿಸಿದ ನಂತರ ಆತ ದೇವರಿಗೆ ಕೈ ಮುಗಿದು ಆತ ಬೇಡಿಕೊಂಡಿದ್ದಾನೆ. `ಮತ್ತೆ ಈ ಕಡೆ ಬರಬಾರದು’ ಎಂದು ಎಚ್ಚರಿಕೆ ನೀಡಿ ದೇವಾಲಯದವರು ಆತನನ್ನು ಬಿಟ್ಟು ಕಳುಹಿಸಿದರು.





