ಶಿರಸಿ: ಸಾಕಷ್ಟು ಹೋರಾಟದ ನಂತರ ಅರಣ್ಯ ಅತಿಕ್ರಮಣದಾರರ ಜೊತೆ ಅರಣ್ಯಾಧಿಕಾರಿಗಳು ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, `ಈ ಸಭೆಗೆ 10 ಜನ ಮಾತ್ರ ಆಗಮಿಸಬೇಕು’ ಎಂದು ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಅರಣ್ಯ ಇಲಾಖೆಯಿಂದ ಪತ್ರ ಬಂದಿದೆ!
ಈಚೆಗೆ ಹೊನ್ನಾವರದಲ್ಲಿ ಅರಣ್ಯ ಅತಿಕ್ರಮಣದಾರರು ಹಾಗೂ ಅರಣ್ಯ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಆದರೆ, 3 ಸಾವಿರಕ್ಕೂ ಅಧಿಕ ಅರಣ್ಯ ಅತಿಕ್ರಮಣದಾರರು ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಅರಣ್ಯ ಅಧಿಕಾರಿ-ಸಿಬ್ಬಂದಿ ಮಾತ್ರ ಬೆರಳಣಿಕೆ ಸಂಖ್ಯೆಯಲ್ಲಿದ್ದರು. ಈ ಸಭೆಯಲ್ಲಿ ಸಾಕಷ್ಟು ಮಾತುಕಥೆ-ವಾಗ್ವಾದದ ನಂತರ ಇನ್ನೊಂದು ದಿನ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಅದರ ಪ್ರಕಾರ ಶಿರಸಿಯ ಅರಣ್ಯ ವೃತ್ತ ಕಚೇರಿಯಲ್ಲಿ ಜನವರಿ 9ರಂದು ಬೆಳಗ್ಗೆ 11 ಗಂಟೆಗೆ ಸಭೆ ನಡೆಸುವ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಅರಣ್ಯ ಅತಿಕ್ರಮಣದಾರರ ಕಚೇರಿಗೆ ಪತ್ರ ರವಾನೆಯಾಗಿದೆ. ಆದರೆ, ಈ ಪತ್ರದಲ್ಲಿ 10 ಜನ ಮಾತ್ರ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
`ಅರಣ್ಯವಾಸಿಗಳೊಂದಿಗೆ ಸೌಹಾರ್ಧಿತವಾಗಿ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುವ ಮತ್ತು ಅರಣ್ಯವಾಸಿಗಳ ಮೇಲೆ ಜರುಗುತ್ತಿರುವ ದೌಜನ್ಯ, ಕಿರುಕುಳದ ಬಗ್ಗೆ ಹಿರಿಯ ಅಧಿಕಾರಿಯೊಂದಿಗೆ ಸಮಾಲೋಚಿಸುವ ಉದ್ದೇಶದಿಂದ ಸಭೆ ನಡೆಸಲು ಒತ್ತಾಯಿಸಲಾಗಿತ್ತು. 10 ಜನರ ಬದಲು ಜಿಲ್ಲೆಯ ಎಲ್ಲಾ ತಾಲೂಕಿನ ಪ್ರತಿನಿಧಿಗಳ ಸಮಕ್ಷೇಮದಲ್ಲಿ ಸಭೆ ನಡೆಸಬೇಕು ಎಂದು ಲಿಖಿತವಾಗಿ ಕೋರಲಾಗಿದೆ’ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.




