ಶಿರಸಿ: ಕಳ್ಳತನ ಪ್ರಕರಣದ ಆರೋಪಿಯ ರಕ್ಷಣೆಗಾಗಿ ನಾಲ್ವರು ಮಹಿಳೆಯರು ಸೇರಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಮೂವರು ಪುರುಷರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಈ ಹೊಡೆದಾಟದಿಂದ ಒಟ್ಟು ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಗಲಾಟೆಯ ನಡುವೆ ಮನೆಯಲ್ಲಿ ಅಡಗಿದ್ದ ಕಳ್ಳ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನ ಹುಡುಕಾಟ ಮುಂದುವರೆದಿದೆ.
2024ರ ಡಿಸೆಂಬರ್ 22ರಂದು ಶಿರಸಿ ನಗರದಲ್ಲಿ ಕಳ್ಳತನ ನಡೆದಿದ್ದು, ಅಲ್ಲಿ ಸಿಕ್ಕ ಬೆರಳಚ್ಚು ಅನ್ವರ್ ಭಾಷಾ ಎಂಬಾತರಿಗೆ ಹೊಂದಾಣಿಕೆಯಾಗಿತ್ತು. ಈ ಹಿನ್ನಲೆ 2025ರ ಜನವರಿ 3ರಂದು ಅನ್ವರ್ ಭಾಷಾ’ನನ್ನು ವಿಚಾರಣೆಗೆ ಒಳಪಡಿಸಲು ಆತ ಅಡಗಿದ್ದ ಮನೆಗೆ ಪೊಲೀಸರು ತೆರಳಿದ್ದರು. ಆರ್ಟಿಓ ಕಚೇರಿ ಬಳಿಯ ಶಾಲ್ಮಲಾ ಬಡವಾಣೆ ರಸ್ತೆಯ ಮನೆಗೆ ಹೋದ ಪೊಲೀಸರು ಅಲ್ಲಿ ಅನ್ವರ್ ಭಾಷಾನ ಕುರಿತು ವಿಚಾರಿಸಿದರು. ಆಗ, ಮನೆಯಲ್ಲಿದ್ದ ಮುಬಾರಕ್ ಭಾಷಾ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರ್ಕರ್ ಮೇಲೆ ಕೈ ಮಾಡಿದರು.
ಆ ಮನೆಯಲ್ಲಿದ್ದ ಆಬೀದ್ ಖಾನ್, ರಷೀದಾ ಶೇಖ್, ಅಪ್ರೀನ್ ಶೇಖ್, ರಫಿಯಾ ಶೇಖ್
ಅಮ್ರೀನ್ ಶೇಖ್ ಸೇರಿ ಪೊಲೀಸ್ ಸಿಬ್ಬಂದಿ ಹನುಮಂತ ಮಾಕಾಪುರ, ರಾಮಯ್ಯ ಪೂಜಾರಿ, ವಿದ್ಯಾ ನಾಯ್ಕ ಅವರನ್ನು ಥಳಿಸಿದರು. ಮಹಿಳಾ ಪೊಲೀಸ್ ಸಿಬ್ಬಂದಿ ವಿದ್ಯಾ ನಾಯ್ಕ ಅವರನ್ನು ಎಳೆದಾಡಿ ಅವರ ಸಮವಸ್ತçವನ್ನು ಈ ದುಷ್ಕರ್ಮಿಗಳು ಹರಿದರು. ಈ ಹೊಡೆದಾಟದಲ್ಲಿ ಕಳ್ಳತನದ ಆರೋಪಿ ಅನ್ವರ್ ಭಾಷಾ ಅಲ್ಲಿಂದ ಓಡಿ ಹೋಗಿದ್ದು, ಪೊಲೀಸರು ಆತನ ಹುಡುಕಾಟವನ್ನು ನಡೆಸಿದ್ದಾರೆ.
ಈ ಎಲ್ಲಾ ಘಟನಾವಳಿಗಳ ಬಗ್ಗೆ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರ್ಕಕರ್ ಪೊಲೀಸ್ ಠಾಣೆಗೆ ಬಂದು ವರದಿ ಒಪ್ಪಿಸಿದ್ದು, ಪಿಎಸ್ಐ ರತ್ನಾ ಕುರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ. ತಪ್ಪಿಸಿಕೊಂಡ ಕಳ್ಳನ ಹುಡುಕಾಟವೂ ಮುಂದುವರೆದಿದೆ.




