ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಎರಡು ಮಹಿಳೆಯರ ಕೊಲೆ ಪ್ರಕರಣವನ್ನು ಬೇಧಿಸಿ ಕೊಲೆಗಾರರನ್ನು ಬಂಧಿಸಿದ ತನಿಖಾ ತಂಡದವರಿಗೆ ಸರ್ಕಾರ 25 ಸಾವಿರ ರೂ ಬಹುಮಾನ ನೀಡಿದೆ. ಅತ್ಯಂತ ಸಣ್ಣ ಸುಳುವು ಸಹ ಇಲ್ಲದೇ ಸಿದ್ದಾಪುರ ಹಾಗೂ ರಾಮನಗರದಲ್ಲಿ ಮಹಿಳೆಯರಿಬ್ಬರ ಕೊಲೆ ನಡೆದಿತ್ತು. ಅತ್ಯಂತ ಚಾಣಾಕ್ಷತನದಿಂದ ಪೊಲೀಸರು ತನಿಖೆ ನಡೆಸಿ ಕೊಲೆಗಾರರನ್ನು ಬಂಧಿಸಿದ್ದಾರೆ.
ಈ ಹಿನ್ನಲೆ ಶುಕ್ರವಾರ ಈ ಎರಡು ತನಿಖಾ ತಂಡಕ್ಕೆ ತಲಾ 25 ಸಾವಿರ ಬಹುಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಘೋಷಿಸಿದರು. ಸಿದ್ದಾಪುರದಲ್ಲಿ ಗೀತಾ ಹುಂಡೇಕರ್ ಎಂಬಾತರನ್ನು ಕೊಂಡ್ಲಿಯ ಅಭಿಜಿತ ಗಣಪತಿ ಮಡಿವಾಳ ಕೊಲೆ ಮಾಡಿದ್ದ. ಸಿದ್ದಾಪುರ ಪಟ್ಟಣದ ವಿಶ್ವಾಸ ಹೊಟೇಲ್ ಹತ್ತಿರ ಆತನನ್ನು ವಶಕ್ಕೆ ಪಡೆದರು. ಗೀತಾ ಅವರ ಹಣ, ಬಂಗಾರದ ಆಭರಣಗಳನ್ನು ದೋಚಿ ಕೊಲೆ ಮಾಡಿದ ಬಗ್ಗೆ ಆತ ಒಪ್ಪಿಕೊಂಡಿದ್ದು, 4 ಗ್ರಾಂ ತೂಕದ ಬಂಗಾರದ ಕಿವಿ ಓಲೆ ಜೊತೆ 1400 ರೂ ಹಣ ಸಿಕ್ಕಿದೆ. ಆರೋಪಿತನ ಮನೆಯಲ್ಲಿದ್ದ 3 ಬಂಗಾರದ ಬಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಭಿಜಿತ್ ಮಡಿವಾಳ ಕದ್ದ 20,680ರೂ ಹಣದಲ್ಲಿ 19,280ರೂಪಾಯಿಯನ್ನು ಕಾರ್ತಿಕೊತ್ಸವದ ದಿನ ಮನೆಯಲ್ಲಿ ಹಬ್ಬ ಮಾಡಿದ್ದು, ಅದ್ಧೂರಿ ಹಬ್ಬ ಆಚರಣೆಯ ಅನುಮಾನವೇ ಆತನನ್ನು ವಶಕ್ಕೆ ಪಡೆಯಲು ನೆರವಾಗಿದೆ.
ಇನ್ನೂ ರಾಮನಗರದ ಕ್ಯಾಸಲರಾಕ್ ರಸ್ತೆಯ ಕಾಡಿನಲ್ಲಿ ಶಾಹಿಜಹಾನ್ ಉಸ್ಮಾನ್ ಶೇಖ್ ಎಂಬಾತರ ಮೇಲೆ ಹಲ್ಲೆ ನಡೆದಿದ್ದು. ಒಂಟಿ ಮಹಿಳೆಗೆ ಚಿಕಿತ್ಸೆ ನೀಡಿದರೂ ಬದುಕಿರಲಿಲ್ಲ. ವಿಚಾರಣೆ ನಡೆಸಿದ ಪೊಲೀಸರು ಪ್ರತಿಮಾ ಪ್ರಕಾಶ ಮರಾಠೆ ಎಂಬಾತರನ್ನು ವಶಕ್ಕೆ ಪಡೆದಿದ್ದು, ಹಣಕ್ಕಾಗಿ ಆಕೆಯೇ ಕೊಲೆ ನಡೆಸಿರುವುದು ಖಚಿತವಾಗಿದೆ.




