ಶಿರಸಿ: ಹೈಟೆಕ್ ಆಸ್ಪತ್ರೆ ವಿಷಯದಲ್ಲಿನ ಗೊಂದಲ ಬಗೆಹರಿಸುವಂತೆ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಶಾಸಕ ಭೀಮಣ್ಣ ನಾಯ್ಕ ಅವರಿಗೆ ನೀಡಿದ ಒಂದು ವಾರದ ಗಡುವು ನೀಡಿದ್ದು, ಈವರೆಗೂ ಶಾಸಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅನಂತಮೂರ್ತಿ ಹೆಗಡೆ ಹೋರಾಟ ಮುಂದುವರೆಸಿದ್ದಾರೆ. ಅವರು ಈಗಾಗಲೇ ಘೋಷಿಸಿದಂತೆ ಜನವರಿ 13ರಂದು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
`ಕಳೆದ ಒಂದು ವರ್ಷದಿಂದ ಶಿರಸಿಯಲ್ಲಿನ ಸರಕಾರಿ ಆಸ್ಪತ್ರೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಆರೋಪಿಸಿದ್ದರು. `ಕಾಟಾಚಾರಕ್ಕೆ ಇಲ್ಲಿ ಕೆಲಸ ನಡೆಯುತ್ತಿದ್ದು, ಇಡೀ ಆಸ್ಪತ್ರೆ ಅಪಾಯದಲ್ಲಿದೆ’ ಎಂಬ ಅನುಮಾನ ವ್ಯಕ್ತಪಡಿಸಿದ್ದರು. `ಆಸ್ಪತ್ರೆಯ ಅನುದಾನದ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಹಾಗೂ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಈ ಬಗ್ಗೆ ಜನರಿಗೆ ಸ್ಪಷ್ಠ ಮಾಹಿತಿ ನೀಡಬೇಕು’ ಎಂದು ಅವರು ಆಗ್ರಹಿಸಿದ್ದರು. ಇದಕ್ಕಾಗಿ ಅವರು ಒಂದು ವಾರದ ಗಡುವು ನೀಡಿದ್ದು, ಈವರೆಗೂ ಪ್ರತಿಕ್ರಿಯೆ ಬಾರದ ಕಾರಣ ಉಪವಾಸ ಧರಣಿ ನಡೆಸಲು ನಿರ್ಧರಿಸಿದ್ದಾರೆ.
`ಆಸ್ಪತ್ರೆ ಬಗ್ಗೆ ಈ ಹಿಂದೆ ಸಹ ಮಾಹಿತಿ ಕೇಳಲಾಗಿತ್ತು. ಅದಕ್ಕೆ ಯಾವ ಜನಪ್ರತಿನಿಧಿಗಳು ಉತ್ತರಿಸಿರಲಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಆಯುಷ್ಮಾನ್ ಭಾರತ್ ಯೋಜನೆಯ ಶಿಫಾರಸ್ಸು ಪತ್ರಕ್ಕಾಗಿಯೂ ಜನ ಕಾರವಾರಕ್ಕೆ ಅಲೆದಾಡಬೇಕಿದ್ದು ಈ ಪತ್ರ ಶಿರಸಿಯಲ್ಲಿ ಸಿಗಬೇಕು. ದಿವ್ಯಾಂಗ್ಯರು ಸಹ ಕಾರವಾರಕ್ಕೆ ಅಲೆದಾಡುವುದನ್ನು ತಪ್ಪಿಸಬೇಕು’ ಎಂದವರು ಆಗ್ರಹಿಸಿದ್ದಾರೆ.
`ಹೈಟೆಕ್ ಆಸ್ಪತ್ರೆಯ ಲೆಕ್ಕಾಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಹಣಕಾಸು, ಅನುದಾನದ ಬಗ್ಗೆ ಮಾಹಿತಿ ನೀಡುವವರಿಲ್ಲ ಎಂಬAತಾಗಿದೆ. ಈ ಬಗ್ಗೆ ಪ್ರಶ್ನಿಸಿದರೂ ಉತ್ತರ ಬಾರದ ಕಾರಣ ಹೋರಾಟಕ್ಕೆ ನಿರ್ಧರಿಸಲಾಗಿದೆ’ ಎಂದವರು ಹೇಳಿದ್ದಾರೆ. ಜನವರಿ 23ರಂದು ಶಾಸಕರ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಅವರು ತಿಳಿಸಿದ್ದಾರೆ.




