ಜೊಯಿಡಾ: ರೈಲ್ವೆ ಇಲಾಖೆಯಲ್ಲಿ ಕಾಸು ಕೊಟ್ಟು ತಮ್ಮನಿಗೆ ಕೆಲಸ ಕೊಡಲು ಮುಂದಾದ ಶಿಕ್ಷಕಿ ಜ್ಯೋತಿ ಪರಬ್ 2.20 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಪ್ರವೀಣ ದೊಡ್ಡಮನಿ ಇದೀಗ ಫೋನು ಸ್ವೀಕರಿಸುತ್ತಿಲ್ಲ!
ಜೊಯಿಡಾ ರಾಮನಗರದ ರಾಮಲಿಂಗಗಲ್ಲಿಯಲ್ಲಿ ವಾಸಿಸುವ ಜ್ಯೋತಿ ಅವರು ಶಿಕ್ಷಕಿಯಾಗಿ ಸೇವೆಯಲ್ಲಿದ್ದಾರೆ. ಅವರಿಗೆ ತಮ್ಮ ಸಾಗರ ಅವರ ಭವಿಷ್ಯದ ಬಗ್ಗೆ ಸದಾ ಚಿಂತೆ. ಹೀಗಾಗಿ ತಮ್ಮನಿಗೆ ಕೆಲಸ ಕೊಡಿಸುವುದಕ್ಕಾಗಿ ಅವರು ಎಲ್ಲಾ ಕಡೆ ಹುಡುಕಾಡಿದ್ದರು. 2022ರಲ್ಲಿ ತಮ್ಮನ ಸ್ನೇಹಿತ ಎಂದು ಪರಿಚಯಿಸಿಕೊಂಡ ಪ್ರವೀಣ ದೊಡ್ಡಮನಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು.
ಸಾಗರ ಅವರು ಐಟಿಐ ಮುಗಿಸಿದ ನಂತರ ಅವರ ಅಕ್ಕ ಜ್ಯೋತಿ ಅವರು ಪ್ರವೀಣ ದೊಡ್ಡಮನಿ ಅವರನ್ನು ಭೇಟಿ ಮಾಡಿದ್ದು, `ಕೆಲಸ ಕೊಡಿಸಲು 3 ಲಕ್ಷ ರೂ ಖರ್ಚಿದೆ’ ಎಂದು ದೊಡ್ಡಮನಿ ದುಡ್ಡು ಕೇಳಿದ್ದರು. ಇದಕ್ಕೆ ಒಪ್ಪಿದ ಜ್ಯೋತಿ ಅವರು ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2.40 ಲಕ್ಷ ರೂಪಾಯಿಯನ್ನು ದೊಡ್ಡಮನಿ ಖಾತೆಗೆ ವರ್ಗಾಯಿಸಿದ್ದರು. ಅದಾದ ನಂತರ ಕೆಲವೇ ದಿನದಲ್ಲಿ ಕೆಲಸ ಕೊಡಿಸುವುದಾಗಿ ಪ್ರವೀಣ ದೊಡ್ಡಮನಿ ಹೇಳಿಕೊಂಡಿದ್ದು, ನಂತರ ಫೋನ್ ಮಾಡಿದಾಗಲೆಲ್ಲ ಹಾರಿಕೆ ಉತ್ತರ ಕೊಡುತ್ತಿದ್ದರು.
ಕೊನೆಗೆ ಅವರು ಫೋನ್ ಸ್ವೀಕರಿಸುವುದನ್ನು ನಿಲ್ಲಿಸಿದರು. ಇದರಿಂದ ಕಾಸು ಕೊಟ್ಟರೆ ಕೆಲಸ ಆಗುವುದಿಲ್ಲ ಎಂಬುದು ಶಿಕ್ಷಕಿ ಜ್ಯೋತಿ ಪರಬ್ ಅವರಿಗೆ ಅರಿವಾಯಿತು. ತನಗೆ ಆದಂತೆ ಬೇರೆಯವರಿಗೆ ಆಗುವುದು ಬೇಡ’ ಎಂದು ನಿರ್ಧರಿಸಿ ಅವರು ಪ್ರವೀಣ ದೊಡ್ಡಮನಿ ವಿರುದ್ಧ ಪೊಲೀಸ್ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ `ಪ್ರಭಾವಿ’ ಪಟ್ಟಿಯಲ್ಲಿರುವ ಪ್ರವೀಣ ದೊಡ್ಡಮನಿಯ ಹುಡುಕಾಟದಲ್ಲಿದ್ದಾರೆ.




