ಹಳಿಯಾಳ: ಜಿಲ್ಲಾಡಳಿತದ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ ಕಬ್ಬು ಬೆಳೆಗಾರರ ಸಮಿತಿ ಸದಸ್ಯರು ಬುಧವಾರ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ್ದು, ಕಬ್ಬಿನ ಇಳುವರಿ ಬಗ್ಗೆ ಪರಿಶೀಲನೆ ನಡೆಸಿದರು.
ಕಂಪನಿ ನೀಡುತ್ತಿದ್ದ ವರದಿ ಬಗ್ಗೆ ರೈತರು ಸಂದೇಹ ವ್ಯಕ್ತಪಡಿಸಿದ್ದರು. ಕಬ್ಬಿನ ಇಳುವರಿಗೆ ಸಂಬAಧಿಸಿ ರೈತರು ಮಂಡಿಸಿದ್ದ ಇಳುವರಿ ವರದಿ ಸರಿ ಎಂದು ರೈತರು ವಾದಿಸಿದ್ದರು. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಸಭೆ ನಡೆಸಿ ಸಮಿತಿ ರಚಿಸಿತ್ತು.
ಆಹಾರ ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಕರ ಹಾಗೂ ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ ಜೊತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ ಆಯ್ ಮಾನೆ ತಂಡದವರು ರೈತ ಮುಖಂಡರ ಜೊತೆ ಕಬ್ಬಿನ ಇಳುವರಿ ಪರೀಕ್ಷೆ ನಡೆಸಿದರು.
ಸುಮಾರು ಹತ್ತು ವಿವಿಧ ವಾಹನಗಳಿಂದ ಕಬ್ಬನ್ನು ಪಡೆದು ಅದನ್ನು ಅರೆದರು. ನಂತರ ಕಬ್ಬಿನ ಹಾಲಿನ ಪರೀಕ್ಷೆ ನಡೆಸಿದರು. 13.6ರ ಇಳುವರಿ ಪ್ರಮಾಣ ಕಾಣಿಸಿದ್ದು, ಸಂಪೂರ್ಣ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಸಮಿತಿಯವರು ತಿಳಿಸಿದರು.




