ಶಿರಸಿ: ತಾಲೂಕಾ ಆಡಳಿತ ಸಭಾ ಭವನದಲ್ಲಿ ಸಹಾಯಕ ಆಯುಕ್ತೆ ಕಾವ್ಯರಾಣಿ ಬುಧವಾರ ಸಭೆ ಕರೆದಿದ್ದು, ಬಹುತೇಕ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಸಹಾಯಕ ಆಯುಕ್ತರು ಸಿಡಿಮಿಡಿಗೊಂಡರು!
`ಅಧಿಕಾರಿಗಳು ಸಭೆಗೆ ಬರುವವರೆಗೂ ಸಭೆ ಶುರು ಮಾಡುವುದಿಲ್ಲ’ ಎಂದು ಕಾವ್ಯರಾಣಿ ಖಡಕ್ ಆಗಿ ಹೇಳಿದರು. `ಇದು ನಿಮ್ಮ ಮನೆ ಕೆಲಸ ಅಲ್ಲ. ಸರ್ಕಾರಿ ಕೆಲಸ’ ಎಂದು ಅಧಿಕಾರಿಗಳಿಗೆ ಜಾಡಿಸಿದರು. `ಈ ಸಭೆ ತಹಶೀಲ್ದಾರರು, ಡಿವೈಎಸ್ಪಿ ಹಾಗೂ ಸಹಾಯಕ ಆಯುಕ್ತರಿಗೆ ಮಾತ್ರವಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳು ಕೂಡಲೇ ಹಾಜರಾಗಬೇಕು’ ಎಂದು ಫಾರ್ಮಾನು ಹೊರಡಿಸಿದರು. ಆಗ ಕಚೇರಿಯಲ್ಲಿ ಅಡಗಿದ್ದ ಅಧಿಕಾರಿಗಳೆಲ್ಲರೂ ಸಾಲಾಗಿ ಸಭೆಗೆ ಬಂದು ಕೈ ಮುಗಿದರು.
ಗಣರಾಜ್ಯೋತ್ಸವ ಆಚರಣೆಯ ರೂಪುರೇಷೆ ಚರ್ಚಿಸುವುದಕ್ಕಾಗಿ ಈ ಸಭೆ ಕರೆಯಲಾಗಿತ್ತು. ಎಲ್ಲಾ ಇಲಾಖೆ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿತ್ತು. ಅದಾಗಿಯೂ ಅನೇಕ ಅಧಿಕಾರಿಗಳು ಅಧೀನ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿ, ತಾವು ಗೈರಾಗಿದ್ದರು. ಇದರಿಂದ ಸಿಟ್ಟಾದ ಕಾವ್ಯಾರಾಣಿ ಎಲ್ಲರಿಗೂ ಬಿಸಿ ಮುಟ್ಟಿಸಿದರು.




