ಕಾರವಾರ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಲು ಆಯುಷ್ಮಾನ್ ಯೋಜನೆಯ ಅನುಮೋದನೆ ಕಡ್ಡಾಯ ಎಂಬ ನಿಯಮ ವಿರೋಧಿಸಿ ಜನಶಕ್ತಿ ವೇದಿಕೆ ಮಾಧವ ನಾಯಕ ಅವರು ಧರಣಿ ನಡೆಸಲು ನಿರ್ಧರಿಸಿದ್ದು ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆದಿದ್ದಾರೆ. ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಹಾಗೂ ಕಿಮ್ಸ್ ನಿರ್ದೇಶಕಿ ಡಾ ಪೂರ್ಣಿಮಾ ಅವರು ನಿಯಮ ಸಡಲಿಕೆ ಹಿಂಪಡೆಯುವ ಭರವಸೆ ನೀಡಿದ ಹಿನ್ನಲೆ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಆಯುಷ್ಮಾನ್ ಯೋಜನೆ ಅನುಮೋದನೆಗೆ 6 ತಾಸು ಬೇಕು. ಸ್ಕಾನಿಂಗ್ ನಂತರ ಪೂಣಾದಿಂದ ಸ್ಕಾನಿಂಗ್ ವರದಿ ಅಧಿಕೃತವಾಗಿ ವೈದ್ಯರ ಕೈ ಸೇರಲು ಕನಿಷ್ಟ 5 ತಾಸು ಬೇಕು. ಅಷ್ಟರವರೆಗೆ ರೋಗಿ ಬದುಕಿರುವ ಸಾಧ್ಯತೆ ಕಡಿಮೆ. ಹೀಗಾಗಿ ಈ ನಿಯಮ ತೆಗೆಯಬೇಕು ಎಂದು ಮಾಧವ ನಾಯಕ ಅವರು ಆಗ್ರಹಿಸಿದ್ದರು. ಇಲ್ಲವಾದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದರು. ಈ ನಡುವೆ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರು `ಸರ್ಕಾರದ ಹೊಸ ಆದೇಶದಿಂದ ಜನ ಸಾಮಾನ್ಯರಿಗೆ ಸಮಸ್ಯೆ ಆಗುವ ಬಗ್ಗೆ ಆರೋಗ್ಯ ಸಚಿವರ ಜೊತೆ ಚರ್ಚಿಸುವೆ’ ಎಂಬ ಭರವಸೆ ನೀಡಿದ್ದಾರೆ.
ಕಿಮ್ಸ್ ನಿರ್ದೇಶಕಿ ಡಾ ಪೂರ್ಣಿಮಾ ಅವರು ಸಹ `ಹೊಸ ನಿಯಮ ಬದಲಾವಣೆ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುವೆ. ಜನರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುವೆ’ ಎಂದು ಹೇಳಿದ್ದಾರೆ. ಅವರಿಬ್ಬರ ಮಾತಿಗೆ ಗೌರವ ನೀಡಿ ಮಾಧವ ನಾಯಕ ಅವರು ಸದ್ಯ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. `ಕೆಲಸ ಆಗದೇ ಇದ್ದರೆ ಧರಣಿ ನಡೆಸುವುದು ಅನಿವಾರ್ಯ’ ಎಂದವರು ಪುನರುಚ್ಚರಿಸಿದ್ದಾರೆ.




