ಕಾರವಾರ: ಶಿರೂರು ದುರಂತ, ಕಾಳಿ ಸೇತುವೆ ಕುಸಿತ ಹಾಗೂ ಮಾಜಾಳಿಯಲ್ಲಿ ಲಾರಿ ಚಾಲಕನಿಗೆ ಥಳಿತ ಪ್ರಕರಣದಲ್ಲಿ ಲಾರಿ ಚಾಲಕರ ನೆರವಿಗೆ ಬಂದ ಲಾರಿ ಚಾಲಕ ಹಾಗೂ ಮಾಲಕ ಸಂಘದ ರಾಜ್ಯ ಉಪಾಧ್ಯಕ್ಷ ಕೆ ಎಸ್ ಮಣಿ ಹಾಗೂ ಗಿರೀಶ ಮಲನಾಡು ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಲಾರಿ ಚಾಲಕ ಮಾಲಕ ಸಂಘದವರು ಸನ್ಮಾನಿಸಿದ್ದಾರೆ.
ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಸಾವಿರಾರು ಲಾರಿಗಳು ಹೆದ್ದಾರಿ ಪಕ್ಕ ನಿಂತಿದ್ದವು. ಲಾರಿ ಚಾಲಕರು ಸಂಕಷ್ಟ ಅನುಭವಿಸಿದ್ದರು. ಅನೇಕ ಲಾರಿ ಚಾಲಕರು ಅನಾರೋಗ್ಯಕ್ಕೆ ಒಳಗಾಗಿದ್ದು, ಊಟ-ತಿಂಡಿಗೂ ಸಮಸ್ಯೆ ಎದುರಿಸಿದ್ದರು. ಆಗ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಉಪಾಧ್ಯಕ್ಷ ಕೆ ಎಸ್ ಮಣಿ ಹಾಗೂ ಗಿರೀಶ ಮಲನಾಡು ಸ್ಥಳಕ್ಕೆ ಧಾವಿಸಿ ಅವರ ಸಮಸ್ಯೆ ಆಲಿಸಿದ್ದರು. ಆಹಾರ ವಿತರಣೆ ಜೊತೆ ವೈದ್ಯಕೀಯ ಸೌಲತ್ತು ಒದಗಿಸಿದ್ದರು.
ಇದರೊಂದಿಗೆ ಕಾಳಿ ಸೇತುವೆ ಕುಸಿದಾಗ ನದಿಗೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಚಾಲಕನಿಗೂ ಆರ್ಥಿಕ ನೆರವು ನೀಡಿದ್ದರು. ಮಾಜಾಳಿಯಲ್ಲಿ ಮಂಡ್ಯದ ಚಾಲಕನ ಮೇಲೆ ಅಬಕಾರಿ ಅಧಿಕಾರಿ ದಬ್ಬಾಳಿಕೆ ಖಂಡಿಸಿ ಸಂಘದವರು ಪ್ರತಿಭಟಿಸಿದ್ದರು. ಆ ವೇಳೆಯಲ್ಲಿಯೂ ಲಾರಿ ಸಂಘದ ಉಪಾಧ್ಯಕ್ಷರಿಬ್ಬರು ಹಾಜರಿದ್ದರು. ಶಿರೂರು ಗುಡ್ಡ ಕುಸಿತದ ವೇಳೆ ಲಾರಿ ಚಾಲಕ ಮಾಲಕ ಸಂಘದ ಮಾಧವ ನಾಯಕ, ಗಣಪತಿ ಮೂಲೆಮನೆ ಹಾಗೂ ಟೆಂಪೋ ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ನಾಯ್ಕ ಸೇರಿ ಮಾದನಗೇರಿ ಹಾಗೂ ಮಾಸ್ತಿಕಟ್ಟಾ ಬಳಿಯ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಲಾರಿ ಚಾಲಕ ಹಾಗೂ ಮಾಲಕ ಸಂಘದವರು ಶಿರೂರು ಗುಡ್ಡ ದುರಂತದಲ್ಲಿ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರ ಕುಟುಂಬಕ್ಕೆ 1.1 ಲಕ್ಷ ರೂ ನೆರವು ನೀಡಿದ್ದರು.
ಈ ಎಲ್ಲಾ ಸೇವೆಯನ್ನು ಪರಿಗಣಿಸಿ ಸಂಘದ ಇಬ್ಬರು ಉಪಾಧ್ಯಕ್ಷರಿಗೆ ಜಿಲ್ಲಾ ಘಟಕದವರು ಸನ್ಮಾನಿಸಿದರು. ಸಂಘದ ಜಿಲ್ಲಾಧ್ಯಕ್ಷ ಮಾಧವ ನಾಯಕ, ಯಲ್ಲಾಪುರ ತಾಲೂಕು ಅಧ್ಯಕ್ಷ ಸುಜಯ ಮರಾಠಿ, ಅಂಕೋಲಾ ತಾಲೂಕಿನ ಕಿರಣ ನಾಯ್ಕ, ಪ್ರಮುಖರಾದ ಶ್ರೀಕೃಷ್ಣ, ನೂರ್ ಭಾಷಾ, ಪ್ರಶಾಂತ ನಾಯ್ಕ, ದಿಲೀಪ ಕುಮಾರ, ಕ್ವಾಜಾ ಅಕ್ತರ, ಮಹಮದ್ ರಫೀಕ್ ಸುರೇಶ್ ನಾಯ್ಕ, ಸಾಗರ ಮೇಸ್ತ್ರಿ ಇತರರರು ಇದ್ದರು




