ಯಲ್ಲಾಪುರ: ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಫೆ 28ರಿಂದ ಮಾರ್ಚ್ 3ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದೇವಾಲಯದ ಅಷ್ಠಬಂಧ, ಶಿಖರ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ನೂತನ ದೇವಾಲಯ, ಯಾಗಶಾಲೆ ಮತ್ತು ಗುರುಭವನಗಳ ಲೋಕಾರ್ಪಣೆ ಈ ಅವಧಿಯಲ್ಲಿ ನಡೆಯಲಿದೆ. ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ಈ ನಾಲ್ಕು ದಿನಗಳ ಕಾಲ ಪ್ರತಿ ದಿನ ಪ್ರಾತ: ಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಅನುದಿನವೂ 7-8 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. 48 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಈ ಎಲ್ಲಾ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿದ್ದು, ಭಕ್ತರು ನೀಡುವ ಕಾಣಿಕೆಗಳಿಂದಲೇ ಎಲ್ಲಾ ಸಿದ್ಧತೆ ನಡೆದಿದೆ.
ಈ ಬಗ್ಗೆ ದೇಗುಲ ಸ್ವಾಗತ ಸಮಿತಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಭಟ್ಟ ತಾರೀಮಕ್ಕಿ ಮಾಹಿತಿ ನೀಡಿದ್ದು, ವಿವಿಧ ಸಮಿತಿಗಳ ಹೊಣೆಗಾರಿಕೆಯ ಬಗ್ಗೆಯೂ ಅವರು ವಿವರಿಸಿದರು. ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ, ಡಿ.ಶಂಕರ ಭಟ್ಟ, ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ, ಹರಿಪ್ರಕಾಶ ಕೋಣೇಮನೆ, ಸುಬ್ರಾಯ ಭಟ್ಟ ಗುಂಡ್ಕಲ್, ಮುರಳಿ ಹೆಗಡೆ, ಎಲ್ ಪಿ.ಭಟ್ಟ ಸೇರಿದಂತೆ ಹಲವರು ವಿವಿಧ ವಿಷಯಗಳ ಬಗ್ಗೆ ಸಲಹೆ ನೀಡಿದರು.





