ಮುಂಡಗೋಡ: ಬೈಕಿನಲ್ಲಿ ಚಲಿಸುತ್ತಿದ್ದ ಉದ್ಯಮಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಅಪಹರಿಸಿದ್ದಾರೆ. ಗುರುವಾರ ರಾತ್ರಿ ಉದ್ಯಮಿ ಜಮೀರ ಅಹ್ಮದ್ ದರ್ಗಾವಾಲೆ ಅವರ ಅಪಹರಣ ನಡೆದಿದ್ದು, ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಅಪಹರಣದ ಆಘಾತದಿಂದ ಉದ್ಯಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಮೀರ ಅಹ್ಮದ್ ಅವರು ಮುಂಡಗೋಡದಲ್ಲಿ ಎನ್ಎಂಡಿ ಗ್ರೂಫ್ ಎಂಬ ಕಂಪನಿ ನಡೆಸುತ್ತಾರೆ. ಕಂಪ್ಯುಟರ್ ಸೆಂಟರ್, ಬಸ್ಸು-ರೈಲು ಮುಂಗಡ ಕಾಯ್ದಿರಿಸುವಿಕೆ ಸೇರಿ ಹಲವು ಬಗೆಯ ಸೇವೆ ಇಲ್ಲಿದೆ. ಗುರುವಾರ ರಾತ್ರಿ ಜಮೀರ ಅವರು ತಾಲೂಕು ಕ್ರೀಡಾಂಗಣದಿAದ ಮಾದರಿ ಶಾಲೆ ಮಾರ್ಗವಾಗಿ ಚಲಿಸುತ್ತಿರುವಾಗ ದುಷ್ಕರ್ಮಿಗಳು ಅವರ ಬೈಕಿಗೆ ತಮ್ಮ ಕಾರು ಗುದ್ದಿದ್ದರು. ನೆಲಕ್ಕೆ ಬಿದ್ದ ಜಮೀರ ಅವರನ್ನು ತಮ್ಮ ಕಾರಿನಲ್ಲಿ ತುಂಬಿಕೊAಡು ಪರಾರಿಯಾಗಿದ್ದರು. ಜಮೀರ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆಯನ್ನು ನಡೆಸಿದ್ದರು.
ಜಮೀರ ಅವರ ಕುಟುಂಬಕ್ಕೆ ಫೋನ್ ಮಾಡಿದ ದುಷ್ಕರ್ಮಿಗಳು 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಬೆದರಿದ ಕುಟುಂಬದವರು ಬಹುಪಾಲು ಹಣ ನೀಡಿದ ಬಗ್ಗೆ ಮಾಹಿತಿಯಿದ್ದು, ಇದು ಖಚಿತವಾಗಿಲ್ಲ. ಈ ನಡುವೆ ಬಂಕಾಪುರ ಮಾರ್ಗವಾಗಿ ಗದಗ ರಿಂಗ್ ರಸ್ತೆ ಬಳಿ ಜಮೀರ ಮುಖಕ್ಕೆ ಬಟ್ಟೆ ಕಟ್ಟಿ ಮತ್ತಷ್ಟು ಹೊಡೆದಿದ್ದರು. ಅದಾದ ನಂತರ ರಸ್ತೆ ಪಕ್ಕವೇ ಅವರನ್ನು ಬಿಸಾಡಿ ಹೋಗಿದ್ದರು.
ತ್ವರಿತ ಕಾರ್ಯಾಚರಣೆ
ಜಮೀರ್ ಅಪಹರಣದ ಮಾಹಿತಿ ಆಧರಿಸಿ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ಶುರು ಮಾಡಿದ್ದು, ಗೋಕಾಕ್’ದಲ್ಲಿ ಅಡಗಿದ್ದ 4 ಜನರನ್ನು ಬಂಧಿಸಿದ್ದಾರೆ. ಜಮೀರ್ ಅಹ್ಮದ್ ಸಹ ಪೊಲೀಸರ ಕಣ್ಗಾವಲಿನಲ್ಲಿ ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದಾರೆ. ಬಂಧಿತರನ್ನು ಮುಂಡಗೋಡು ಪೊಲೀಸ್ ಠಾಣೆಗೆ ಕರೆ ತರಲಾಗುತ್ತಿದೆ. ಶಿರಸಿ ಡಿವೈಎಸ್ಪಿ ಗಣೇಶ್ ಕೆ ಎಲ್, ಸಿಪಿಐ ರಂಗನಾಥ್ ನೀಲಮ್ಮನವರ್, ಪಿಎಸ್ಐ ಪರಶುರಾಮ ಮಿರ್ಜಗಿ ಹಾಗೂ ಪೊಲೀಸ್ ಸಿಬ್ಬಂದಿ ಪ್ರಕರಣದ ಆಳ-ಅಗಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.




