ಯಲ್ಲಾಪುರ: ಬಾಲ್ಯದಿಂದಲೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ ಸಂತೋಷ ಮರಾಠಿ ಇದೀಗ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ. ದಕ್ಷಿಣ ಏಷ್ಯಾದ ಮಾಸ್ಟರ್ ಅಥ್ಲೆಟಿಕ್ ಓಪನ್ ಚಾಂಪಿಯನ್ಶಿಪ್’ನಲ್ಲಿ ಭಾಗವಹಿಸಿದ ಅವರು ಬೆಳ್ಳಿ ಪದಕದ ಜೊತೆ ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ.
ಯಲ್ಲಾಪುರ ತಾಲೂಕಿನ ಬೆಡಸಗದ್ದೆಯ ಸಂತೋಷ ಮರಾಠಿ ವೃತ್ತಿಯಲ್ಲಿ ಫೋಟೋಗ್ರಾಫರ್. ಇದರೊಂದಿಗೆ ಎಲ್ಲಿಯೇ ಓಟದ ಸ್ಪರ್ಧೆ ಇದ್ದರು ಅವರು ಅಲ್ಲಿ ಹಾಜರು. ಜನವರಿ 10ರಿಂದ 12ರವರೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ನಡೆದಿದ್ದು, ಅಲ್ಲಿಯೂ ಸಂತೋಷ ಮರಾಠಿ ಭಾಗವಹಿಸಿದ್ದರು.

4*400ಮೀಟರ್ ರಿಲೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಅವರು ಬೆಳ್ಳಿ ಪದಕವನ್ನು ಗೆದ್ದರು. ಇದರೊಂದಿಗೆ 800ಮೀ ಓಟದಲ್ಲಿ ನಾಲ್ಕನೇ ಬಹುಮಾನ ಹಾಗೂ 1500 ಮೀಟರ್ ಓಟದಲ್ಲಿ ಆರನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಈ ಹಿಂದೆ ಉಡುಪಿಯ ಅಜ್ರ ಕಾಡು ಮಹಾತ್ಮಗಾಂಧಿ ಕ್ರೀಡಾಂಗಣ ನಡೆದಿದ್ದ ದಕ್ಷಿಣ ಭಾರತದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಹ ಸಂತೋಷ ಮರಾಠಿ ಅವರು 4*400 ಮೀಟರ್ ಹಾಗೂ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದರು. 400 ಮೀ ಹಾಗೂ 1500ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ಸoತೋಷ ಮರಾಠಿ ಅವರಿಗೆ ಅಂತರಾಷ್ಟ್ರೀಯ ಕ್ರೀಡಾಪಟು ಜಿ ಎಂ ತಾಂಡುರಾಯನ್ ಅವರು ತರಬೇತಿ ಕೊಟ್ಟಿದ್ದಾರೆ. ನಿವೃತ್ತ ಸೈನಿಕ ಮಹಾದೇವಚಂದ್ರ ಪಂಡರಾಪುರ, ಕ್ರೀಡಾಪ್ರೇಮಿಗಳಾದ ಅನಂತ ದೇವಕರ, ಶಾಮೋಕ ಪಾಟೀಲ್, ಗಣೇಶ್ ಚಂದ್ರ ಪಂಡರಾಪುರ, ರಾಜೇಶ್ವರಿ ಶಿರೂರ, ಅಶೋಕ ನಾಯ್ಕ, ಮಹೇಶ ಅಲ್ಮಠ ಇತರರು ಸಂತೋಷ ಮರಾಠಿ ಅವರನ್ನು ಪ್ರೋತ್ಸಾಹಿಸಿದ್ದರು.




