ಶಿರಸಿ: ಹೈಟೆಕ್ ಸರ್ಕಾರಿ ಆಸ್ಪತ್ರೆಯಲ್ಲಿನ ಗೊಂದಲ ಬಗೆಹರಿಸುವಂತೆ ಕೋರಿ ಜನವರಿ 13ರಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. `ಆರೋಗ್ಯದ ಹಕ್ಕಿಗಾಗಿ ನಡೆಯುವ ಈ ಹೋರಾಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.
`142 ಕೋಟಿ ರೂ ಮೌಲ್ಯದ ಆಸ್ಪತ್ರೆ ಕೆಲಸ ಸರಿಯಾಗಿಲ್ಲ. ಈ ಬಗ್ಗೆ ಅರಿವಿದ್ದರೂ ನಾವು ಮೌನವಾಗಿದ್ದರೆ ಪ್ರಯೋಜನವಿಲ್ಲ. ಹೈಟೆಕ್ ಆಸ್ಪತ್ರೆ ಬಗ್ಗೆ ಪ್ರಶ್ನಿಸದೇ ಇದ್ದರೆ ಆ ಕಟ್ಟಡ ದೊಡ್ಡ ಗೋಡೌನ್ ಆಗಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಈ ಬಗ್ಗೆ ಪ್ರಶ್ನಿಸೋಣ’ ಎಂದವರು ಹೇಳಿದ್ದಾರೆ.
`ಈ ಹೋರಾಟ ಯಾರ ವಿರುದ್ಧವೂ ಅಲ್ಲ. ಇದು ಒಬ್ಬನ ಹೋರಾಟವೂ ಅಲ್ಲ. ಕ್ಷೇತ್ರದ ಜನರ ಹಿತ ಕಾಪಾಡುವುದಕ್ಕಾಗಿ ಈ ಹೋರಾಟ ಅನಿವಾರ್ಯವಾಗಿದ್ದು, ಪ್ರತಿಯೊಬ್ಬರು ಈ ಹೋರಾಟದಲ್ಲಿ ಭಾಗಿಯಾಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ. `ಹೈಟೆಕ್ ಆಸ್ಪತ್ರೆ ಸ್ಥಾಪನೆಯಾದಲ್ಲಿ ಉಚಿತವಾಗಿ ಹೃದಯ ಚಿಕಿತ್ಸೆ ಸಿಗಲಿದೆ. ಎಲ್ಲಾ ಬಗೆಯ ಸ್ಕಾನಿಂಗ್ ಉಚಿತವಾಗಿ ಸಾಧ್ಯವಾಗಲಿದೆ. ಪ್ರತಿಯೊಬ್ಬರಿಗೂ ಆಸ್ಪತ್ರೆಯ ಅವಷ್ಯಕತೆ ಬೀಳಲಿದ್ದು, ಭವಿಷ್ಯದ ಚಿಂತನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ’ ಎಂದವರು ಹೇಳಿದ್ದಾರೆ.
ಜನವರಿ 13ರ ಬೆಳಗ್ಗೆ 9 ಗಂಟೆಗೆ ಶಿರಸಿ ನಗರದ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟ ಶುರುವಾಗಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ನಂತರ ತಹಶೀಲ್ದಾರ ಕಛೇರಿಯಲ್ಲಿ ಧರಣಿ ನಡೆಸಲಾಗುತ್ತದೆ’ ಎಂದವರು ವಿವರಿಸಿದ್ದಾರೆ.




