ಕಾರವಾರ: 30 ಸಾವಿರ ರೂ ಪಾವತಿಸಿದರೆ 14 ಲಕ್ಷ ರೂ ಸಿಗುತ್ತದೆ ಎಂದು ನಂಬಿಸಿದ ಅಪರಿಚಿತನ ಮಾತಿಗೆ ಮರುಳಾದ ಜಜೀರಾ ಖಾನ್ ತಮ್ಮ ಬಳಿಯಿದ್ದ 2.34 ಲಕ್ಷ ರೂ ಕಳೆದುಕೊಂಡಿದ್ದಾರೆ!
ಕಾರವಾರದ ಕಡವಾಡದ ಜಜೀರಾ ಬಾನು ಕೊಂ ಅನ್ವರ ಖಾನ ಅವರ ಮೊಬೈಲಿಗೆ ಈ `ವಿಶೇಷ ಆಫರ್’ನ ಮೆಸೆಜ್ ಬಂದಿದೆ. ಮೆಸೆಜಿನಲ್ಲಿ ಸೂಚಿಸಿದ ಸಂಖ್ಯೆಗೆ ಅವರು ವಾಟ್ಸಪ್ ಮೂಲಕ ಫೋನ್ ಮಾಡಿದ್ದಾರೆ. ಆಗ ಫೋನ್ ಸ್ವೀಕರಿಸಿದ ವ್ಯಕ್ತಿ `ಬಡ ಜನರಿಗೆ ನೆರವು ನೀಡುವುದಕ್ಕಾಗಿ ನಾವು ವಿಶೇಷ ಯೋಜನೆ ಪರಿಚಯಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾನೆ. ಆತನ ಮಾತಿಗೆ ಮರುಳಾದ ಜಬೀರಾ `ತಾನೂ ಬಡವೆ’ ಎಂದು ಸಾಭೀತು ಮಾಡಿದ್ದಾರೆ.
`ವಿದೇಶದಲ್ಲಿರುವ ಭಾರತೀಯರು ತಮಗೆ ಸಹಾಯ ಮಾಡಲು ಒಪ್ಪಿದ್ದಾರೆ’ ಎಂದು ಆತ ಹೇಳಿದ್ದು, ಅವರು ನೀಡಿದ ಹಣವನ್ನು ಭಾರತದ ಬಡವರಿಗೆ ನಾವು ಹಂಚುತ್ತೇವೆ’ ಎಂದು ಆತ ನಂಬಿಕೆ ಬರುವ ರೀತಿ ಮಾತನಾಡಿದ್ದಾನೆ. `ಇದಕ್ಕಾಗಿ ಮೊದಲು 30 ಸಾವಿರ ರೂ ಪಾವತಿಸಬೇಕು. ಆಗ ನಿಮ್ಮ ಮನೆಗೆ ಎಸ್ಬಿಐ ಎಟಿಎಂ ಕಾರ್ಡ ಬರಲಿದ್ದು, ಅದರ ಮೂಲಕ 14 ಲಕ್ಷ ರೂ ಪಡೆಯಬಹುದು’ ಎಂದು ಸಹ ಆತ ಫುಸಲಾಯಿಸಿದ್ದಾನೆ.
ಆತ ಪದೇ ಪದೇ ಫೋನ್ ಮಾಡಿದ ರೀತಿಗೆ ಮರುಳಾದ ಜಜೀರಾ ಮೊದಲು 30 ಸಾವಿರ ಪಾವತಿಸಿದ್ದಾರೆ. ನಂತರ ಆತ ತಿಳಿಸಿದ ರೀತಿ ಪದೇ ಪದೇ ಹಣ ನೀಡಿದ್ದಾರೆ. 2024ರ ನವೆಂಬರ್ 13ರಿಂದ ಡಿಸೆಂಬರ್ 5ರವರೆಗೂ ಅವರು 134935ರೂ ಹಣವನ್ನು ಆತನ ಖಾತೆಗೆ ವರ್ಗಾಯಿಸಿದರೂ 14 ಲಕ್ಷ ರೂ ಹೊತ್ತ ಎಟಿಎಂ ಕಾರ್ಡ ಮಾತ್ರ ಮನೆಗೆ ಬಂದಿಲ್ಲ!
ತಾಯಿ ಮೋಸ ಹೋಗಿರುವುದನ್ನು ಅರಿತ ಅವರ ಪುತ್ರಿ ವಫಾ ಖಾನ್ ಇದೀಗ ಪೊಲೀಸ್ ದೂರು ನೀಡಿದ್ದಾರೆ. `ತಮ್ಮ ಹಣ ತಮಗೆ ಮರಳಿಸಿ’ ಎಂದವರು ಮನವಿ ಮಾಡಿದ್ದಾರೆ.




