ಯಲ್ಲಾಪುರ: ಹುಣಶಟ್ಟಿಕೊಪ್ಪ ಬಳಿಯ ಡೋಮಗೇರಿ ಗೌಳಿವಾಡಕ್ಕೆ ಸರಬರಾಜು ಆದ ನೀರು ಕುಡಿದ ಹಲವರು ಅಸ್ವಸ್ಥರಾಗಿದ್ದಾರೆ. ಈ ವಿಷಯ ಅರಿತ ಆರೋಗ್ಯ ಸಿಬ್ಬಂದಿ ತಕ್ಷಣ ಅಸ್ವಸ್ಥರಾದವರ ಉಪಚಾರ ನಡೆಸಿ ಅವರನ್ನು ಸಮಾದಾನ ಮಾಡಿದರು.
ಗೌಳಿವಾಡದ ಜನರಿಗೆ ಓವರ್ಹೆಡ್ ಟ್ಯಾಂಕಿನಿoದ ನೀರು ಪೂರೈಕೆಯಾಗಿದ್ದು, ಈ ನೀರು ವಾಸನೆಯಿಂದ ಕೂಡಿತ್ತು. ಪೂರ್ತಿ ನೀರು ಖಾಲಿ ಮಾಡಿದಾಗ ಅಲ್ಲಿ ಹಾವು ಸತ್ತಿರುವುದು ಗಮನಕ್ಕೆ ಬಂದಿತು. ಆದರೆ, ಅದು ವಿಷಕಾರಿ ಹಾವು ಆಗಿರಲಿಲ್ಲ.
ಆರೋಗ್ಯ ಇಲಾಖೆಯ ಸಿಬ್ಬಂದಿ ಭವ್ಯಾ ದೇವಾಡಿಗ, ಸಮೂದಾಯ ಆರೋಗ್ಯ ಅಧಿಕಾರಿ ಶ್ರದ್ಧಾ ಭಗತ ಮುತುವರ್ಜಿವಹಿಸಿ ಅಸ್ವಸ್ಥರಾದವರನ್ನು ಆರೈಕೆ ಮಾಡಿದರು. ಗ್ರಾ ಪಂ ಅಧಿಕಾರಿ ಅಣ್ಣಪ್ಪ ವಡ್ಡರ ಹಾಗೂ ಗ್ರಾ ಪಂ ಸದಸ್ಯರು ನೀರಿನ ಪರಿಶೀಲನೆ ನಡೆಸಿದರು. ನೀರು ಕುಡಿದು ಅಸ್ವಸ್ಥರಾದ 45 ಜನರ ಆರೋಗ್ಯ ತಪಾಸಣೆ ನಡೆದಿದ್ದು, ಎಂಟು ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಆರೋಗ್ಯಾಧಿಕಾರಿ ಕಳಕಳಿ:
`ಕಲುಷಿತ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಹೀಗಾಗಿ ನೀರು ಕುದಿಸಿ ಆರಿಸಿ ಕುಡಿಯುವುದು ಉತ್ತಮ’ ಎಂದು ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್ ವಿವರಿಸಿದರು. `ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ವಾಂತಿ – ಬೇಧಿ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು’ ಎಂದವರು ಸೂಚಿಸಿದರು.




