ಯಲ್ಲಾಪುರ: ಹಾಸಣಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಯಡಳ್ಳಿ-ಮದ್ಲಗಾರು ನಡುವಿನ ಸಂಪರ್ಕ ಸೇತುವೆ ಸೋಮವಾರ ಕುಸಿದಿದೆ. ಹೀಗಾಗಿ ನಾಳೆಯಿಂದ ಈ ಮಾರ್ಗದಲ್ಲಿ ಓಡಾಡುವ ಅಂಗನವಾಡಿ ಮಕ್ಕಳು 7 ಕಿಮೀ ದೂರದ ಬೆಟ್ಟದ ದಾರಿ ಸುತ್ತುವರೆಯುವುದು ಅನಿವಾರ್ಯ!
10 ವರ್ಷದ ಹಿಂದೆ ಯಡಳ್ಳಿ-ಮದ್ಲಗರು ನಡುವಿನ ಕುಂದೂರು ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿತ್ತು. ನಿತ್ಯ ಓಡಾಡುವ ಜನ ಸೇರಿ ಕುಂದೂರು ಅಂಗನವಾಡಿಯ ಮಕ್ಕಳು ಈ ಪುಟ್ಟ ಸೇತುವೆ ಆಶ್ರಯಿಸಿದ್ದರು. ಸೋಮವಾರ ದಿಢೀರ್ ಆಗಿ ಸೇತುವೆ ನಡುವಿನ ಎರಡು ಕಂಬಗಳು ಕುಸಿತ ಕಂಡಿದೆ. ಈ ಹಿಂದೆ ಸೇತುವೆ ಶಿಥಿಲಗೊಂಡಿದ್ದರೂ ಅಪಾಯವಾಗಿರಲಿಲ್ಲ. ಆದರೆ, ಸೇತುವೆಯ ಪಿಲ್ಲರ್ ಕುಸಿತದಿಂದ ಇದೀಗ ಅಪಾಯದ ಮುನ್ಸೂಚನೆ ಸಿಕ್ಕಿದೆ.
ಇನ್ನೂ ಕುಂದೂರು ಅಂಗನವಾಡಿ ಕೇಂದ್ರದಲ್ಲಿ 14 ಮಕ್ಕಳಿದ್ದಾರೆ. ಆ ಎಲ್ಲಾ ಮಕ್ಕಳು ಇದೇ ಸೇತುವೆ ಬಳಸಿ ಕಲಿಕೆಗೆ ಆಗಮಿಸುತ್ತಾರೆ. ನಡೆದುಬರುವವರಿಗೆ ಈ ಮಾರ್ಗ ಬಿಟ್ಟು ಬೇರೆ ಸರಿಯಾದ ದಾರಿ ಇಲ್ಲ. ಹಳ್ಳಕ್ಕೆ ನೀರು ಕಡಿಮೆಯಿರುವ ಬೇಸಿಗೆ ಅವಧಿಯಲ್ಲಿ ಪಾಲಕರು ಮಕ್ಕಳನ್ನು ಹೆಗಲಮೇಲೆ ಹೊತ್ತು ಅಂಗನವಾಡಿಗೆ ತರಬಹುದು. ಆದರೆ, ಜೋರು ಮಳೆಯಾದರೆ ಇಲ್ಲಿನವರ ಪ್ರಾಣಕ್ಕೆ ಅಪಾಯವಿದೆ.
`ಸೇತುವೆ ಕುಸಿತದಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ನಿತ್ಯದ ಬದುಕಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿದ್ದು, ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕು. ಅಗತ್ಯ ಸೇತುವೆ ಮರು ನಿರ್ಮಾಣ ನಡೆಸಬೇಕು’ ಎಂದು ಕುಂದೂರು ವಾರ್ಡನ್ನು ಪ್ರತಿನಿಧಿಸುವ ಹಾಸಣಗಿ ಗ್ರಾ ಪಂ ಸದಸ್ಯ ಎಂ ಕೆ ಭಟ್ಟ ಯಡಳ್ಳಿ ಒತ್ತಾಯಿಸಿದ್ದಾರೆ.




