ಶಿರಸಿ: ಅಡಿಕೆ ಬೆಳೆಗಾರರಿಗೆ ಈವರೆಗೂ ಬೆಳೆ ವಿಮಾ ಪರಿಹಾರ ಸಿಗದ ಬಗ್ಗೆ ಸೋಮವಾರ ಬೆಳೆಗಾರರು ತೋಟಗಾರಿಕಾ ಕಚೇರಿಗೆ ನುಗ್ಗಿ ಪ್ರತಿಭಟಿಸಿದರು. `ವಿಮಾ ಕಂತು ತುಂಬಲು ಅಗಸ್ಟ 31 ಕೊನೆ ದಿನ ಎನ್ನುವ ಅಧಿಕಾರಿಗಳು ಪರಿಹಾರ ನೀಡುವ ದಿನಾಂಕ ಘೋಷಿಸಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೋಟಗಾರಿಕಾ ಕಚೇರಿಗೆ ನುಗ್ಗಿ ಬೀಗ ಹಾಕುವ ಪ್ರಯತ್ನ ನಡೆಸಿದವರನ್ನು ಪೊಲೀಸರು ತಡೆದರು.
`ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಸರಿಯಾಗಿ ನೀಡದೇ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿ ಎಕರೆಗೆ ರೈತರು 2600ರೂ ವಿಮಾ ಕಂತು ಪಾವತಿಸುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರ 5 ಸಾವಿರ ಹಾಗೂ ರಾಜ್ಯ ಸರ್ಕಾರ 5 ಸಾವಿರ ಕಂತು ಪಾವತಿಸುತ್ತದೆ. ಆ ಮೂಲಕ ಎಕರೆಗೆ 12600ರೂ ವಿಮಾ ಕಂತು ಪಡೆಯುವ ವಿಮಾ ಕಂಪನಿ ಪರಿಹಾರ ನೀಡುವ ವಿಷಯ ಬಂದಾಗ ಎಕರೆಗೆ 6 ಸಾವಿರ ರೂ ನೀಡಿ ಪ್ರಕರಣ ಮುಗಿಸುತ್ತಿದೆ. ಅದನ್ನು ಸಹ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಒಮ್ಮೆ ಅತಿವೃಷ್ಠಿ, ಇನ್ನೊಮ್ಮೆ ಬರಗಾಲದಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ವಿಮಾ ಕಂಪನಿಗೆ ಈ ಬಗ್ಗೆ ಚಿಂತೆ ಇಲ್ಲ. ಇದೀಗ ರೈತರು ಕೂಲಿ ಕೇಳುತ್ತಿಲ್ಲ. ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಣ ನಮಗೆ ಕೊಡಿ ಎಂದು ಆಗ್ರಹಿಸುತ್ತಿದ್ದು, ಮೂರು ದಿನದ ಒಳಗೆ ಎಲ್ಲರ ಖಾತೆಗೆ ಪರಿಹಾರ ಜಮಾ ಆಗಬೇಕು’ ಎಂದು ಆಗ್ರಹಿಸಿದರು. `ಪರಿಹಾರ ಹಣ ಬಾರದೇ ಇದ್ದರೆ ವಿಮಾ ಕಚೇರಿಗೆ ನುಗ್ಗುವುದಕ್ಕೆ ಸಹ ಗೊತ್ತು. ಆದರೆ, ಆ ರೀತಿ ಗಲಾಟೆಗೆ ಅವಕಾಶ ಮಾಡಿಕೊಡಬೇಡಿ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಂಗಾರ ಅಡವಿಟ್ಟು ವಿಮಾ ಕಂತು
`ವಿಮಾ ಕಂತು ಪಾವತಿಗೆ ಕೊನೆ ದಿನಾಂಕ ಪ್ರಕಟಿಸಿದಾಗ ಅನೇಕ ರೈತರ ಬಳಿ ಕಾಸಿರುವುದಿಲ್ಲ. ಮನೆಯಲ್ಲಿದ್ದ ಬಂಗಾರ ಅಡವಿಟ್ಟು ಕಂತು ತುಂಬಿರುತ್ತಾರೆ. ಅದಾಗಿಯೂ ರೈತರಿಗೆ ಕಂಪನಿ ಅನ್ಯಾಯ ಮಾಡುತ್ತಿದೆ. ಪರಿಹಾರ ನೀಡುವ ವಿಷಯ ಬಂದಾಗ ಮಾಪನ ಸರಿಯಲ್ಲ ಎಂದು ಹೇಳಿದ್ದು ಸಹ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜ 16ಕ್ಕೆ ನಿರ್ಧಾರ ಪ್ರಕಟಿಸುವುದಾಗಿ ವಿಮಾ ಅಧಿಕಾರಿಗಳು ಈ ವೇಳೆ ಭರವಸೆ ನೀಡಿ, ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದರು.




