ಕುಮಟಾ: ಕೆಲಸದಾಕೆಯನ್ನು ಪುಸಲಾಯಿಸಿ ಆಕೆಗೆ ಗಂಡು ಮಗುವನ್ನು ದಯಪಾಲಿಸಿದ ಹಳಕಾರಿನ ಮಹೇಶ ಕಿಣಿಗೆ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಕುಮಟಾ ಹಳಕಾರಿನ ಮಹೇಶ ಮನೋಹರ ಕಿಣಿ ಅಲ್ಪ ಪ್ರಮಾಣದ ಬುದ್ದಿಮಾಂದ್ಯರಾಗಿರುವ ಶಮತಿ ಹರಿಕಂತ್ರ (ಹೆಸರು ಬದಲಿಸಿದೆ) ಎಂಬಾತರನ್ನು ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದ. ಕೆಲಸಕ್ಕೆ ಬಂದ ಯುವತಿಯನ್ನು ಆತ ನಿರಂತರವಾಗಿ ಹಿಂಬಾಲಿಸುತ್ತಿದ್ದ. ಆಕೆಯನ್ನು ಆತ್ಮೀಯವಾಗಿ ಪರಿಚಯಿಸಿಕೊಂಡು 2016ರ ಫೆಬ್ರವರಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದರ ಪರಿಣಾಮ ಶಮತಿ ಹರಿಕಂತ್ರ ಅವರು 2016ರ ಡಿಸೆಂಬರ್ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.
ಅಂಗಡಿಯನ್ನು ನಡೆಸುತ್ತಿದ್ದ ಮಹೇಶ ಕಿಣಿ ಅವಿವಾಹಿತನಾಗಿದ್ದ. ಅದಾಗಿಯೂ ಆ ಯುವತಿಯನ್ನು ವರಿಸಲು ಆತ ನಿರಾಕರಿಸಿದ್ದ. ಅದಾದ ನಂತರ `ಈ ವಿಷಯದ ಬಗ್ಗೆ ಎಲ್ಲಾದರೂ ಮಾತನಾಡಿದರೆ ಕೊಲೆ ಮಾಡುವೆ’ ಎಂದು ಮಹೇಶ ಕಿಣಿ ಬೆದರಿಸಿದ್ದ. ಅದಾಗಿಯೂ ಶಮತಿ ಹರಿಕಂತ್ರ ನಡೆದ ಘಟನಾವಳಿಗಳ ಬಗ್ಗೆ ಶಿಕ್ಷಕಿಯೊಬ್ಬರ ಬಳಿ ಹೇಳಿದ್ದರು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿ ತನಿಖೆ ನಡೆಯಿತು. ಹುಟ್ಟಿದ ಮಗುವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದಾಗ ಅದು ಮಹೇಶ ಕಿಣಿಯ ಮಗು ಎಂದು ಸಾಬೀತಾಯಿತು.
ನ್ಯಾಯವಾದಿ ತನುಜಾ ಹೊಸಪಟ್ಟಣ ಅವರು ಸಂತ್ರಸ್ತೆ ಪರವಾಗಿ ವಾದ ಮಂಡಿಸಿದರು. ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ಅತ್ಯಾಚಾರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಸಂತ್ರಸ್ತೆಗೆ 3 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದರು. ಪರಿಹಾರ ನೀಡದೇ ಇದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಕಠಿಣ ಕಾರಾಗೃಹ ವಾಸ ಅನುಭವಿಸುವ ಬಗ್ಗೆಯೂ ಆದೇಶ ಪ್ರಕಟಿಸಿದರು.




