ಚಲಿಸುತ್ತಿರುವ ಬಸ್ಸಿನಿಂದ ಕೆಳಗೆ ಹಾರಿದ ಪರಿಣಾಮ ಶಿರಸಿ ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಹಿರೂರ್ ಅವರಿಗೆ ಪೆಟ್ಟಾಗಿದೆ.
ಜನವರಿ 17ರ ಸಂಜೆ ಕಾಲೇಜು ಮುಗಿಸಿ ಬಂದ ರಕ್ಷಿತಾ ಶಿರಸಿ – ಸಂತೊಳ್ಳಿ ಬಸ್ ಹತ್ತಿದ್ದಾರೆ. ತಲುಪಬೇಕಿರುವ ಬಸ್ ನಿಲ್ದಾಣಕ್ಕೆ ತೆರಳುವ ಮುನ್ನ ಬಸ್ಸಿನಿಂದ ಕೆಳಗೆ ಹಾರಿದ್ದಾರೆ. ಪರಿಣಾಮ ನೆಲಕ್ಕೆ ಬಿದ್ದು ಅವರು ಗಾಯಗೊಂಡಿದ್ದಾರೆ. ದಾಸನಕೊಪ್ಪ ಪೆಟ್ರೋಲ್ ಪಂಪ್ ಬಳಿ ಅವರು ಬಸ್ಸಿನಿಂದ ಹಾರಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿಯೂ ಸೆರೆಯಾಗಿದೆ.
ಬಸ್ಸಿನಿಂದ ಬಿದ್ದ ರಭಸಕ್ಕೆ ರಕ್ಷಿತಾ ಅವರ ಮುಖ, ತಲೆ,ಕೈ ಕಾಲುಗಳಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಅವರನ್ನು ಬಸ್ ಚಾಲಕ-ನಿರ್ವಾಹಕರೇ ಸೇರಿ ಟಿಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದಾಗಿಯೂ ಸಾರಿಗೆ ಸಿಬ್ಬಂದಿ ಎಡವಟ್ಟಿನಿಂದ ವಿದ್ಯಾರ್ಥಿನಿಗೆ ಪೆಟ್ಟಾದ ಬಗ್ಗೆ ಮಾತು ಕೇಳಿ ಬಂದಿದ್ದು, ಸಿಸಿ ಕ್ಯಾಮರಾ ದಾಖಲೆ ತೋರಿಸಿ ಸಾರಿಗೆ ಸಿಬ್ಬಂದಿ ಸತ್ಯ ವಿವರಿಸಿದ್ದಾರೆ.
ಬಸ್ ನಿಲ್ದಾಣ ತಲುಪುವ ಮುನ್ನ ಬಸ್ಸಿನಿಂದ ಇಳಿಯುವ ಪ್ರಯತ್ನ ನಡೆಸಿದ್ದರಿಂದ ಈ ಅವಘಡ ನಡೆದಿದ್ದರೂ ಆ ವಿದ್ಯಾಥಿನಿಗೆ ನೆರವು ನೀಡುವುದಾಗಿ ಸಾರಿಗೆ ಸಂಸ್ಥೆ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಇದರೊಂದಿಗೆ `ಅವಸರದ ಪ್ರಯಾಣ ಅಪಘಾತಕ್ಕೆ ಕಾರಣ’ ಎಂದು ಅವರು ಹೇಳಿದ್ದಾರೆ.




