ಆನ್ಲೈನ್ ಮೂಲಕ ಸ್ವೀಕೃತವಾದ ಅರ್ಜಿ ಪ್ರಕಾರ ಭೂ ಮಾಪನಾ ಕೆಲಸಕ್ಕೆ ತೆರಳಿದ್ದ ಸರ್ವೇಯರ್ ಹಾಗೂ ಅವರ ಸಹಾಯಕರ ಕೆಲಸಕ್ಕೆ ಅಡ್ಡಿಯಾಗಿದೆ. ಭೂಮಿ ಅಳತೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬ ಟೇಪ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಕಾರವಾರದ ಬಾಡ ನಂದನಗದ್ದಾರ ಉತ್ಸವ ಆಚಾರಿ ಅವರು ಜೊಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ಭೂ ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜನವರಿ 10ರಂದು ಆನ್ಲೈನ್ ಮೂಲಕ ಭೂ ಸರ್ವೇ ಅರ್ಜಿ ಸಲ್ಲಿಸಿದವರ ವಿವರ ಪಡೆದ ಅವರು ಜನವರಿ 17ಕ್ಕೆ ಸರ್ವೇ ದಿನಾಂಕ ನಿಗದಿ ಮಾಡಿದ್ದರು. ಅದರ ಪ್ರಕಾರ ಅರ್ಜಿದಾರ ಚಿದಂಬರ ಬಿರ್ಜೆ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಇದರೊಂದಿಗೆ ಅಕ್ಕಪಕ್ಕದ ಭೂ ಒಡೆಯರಾದ ಬೋರೆಗಾಳಿಯ ಭಗವಂತ ಗಾವಡಾ, ಶ್ರೀಪಾದ ಪಂಡಿತ, ದತ್ತಾ ಗಾವಡಾ ಅವರಿಗೂ ಅಂಚೆ ಮೂಲಕ ನೋಟಿಸು ನೀಡಿದ್ದರು.
ಪೂರ್ವ ಸೂಚನೆಯಂತೆ ಜನವರಿ 17ರಂದು ಉತ್ಸವ ಆಚಾರಿ ಸರ್ವೇ ಕೆಲಸಕ್ಕೆ ಹೋದರು. ಸಹಾಯಕ ದರ್ಶನ ದೇಸಾಯಿ ಅವರ ಜೊತೆಗೂಡಿ ಸಂಜೆಯವರೆಗೂ ಟೇಪು ಹಿಡಿದು ಸರ್ವೇ ಮಾಡಿದರು. ಭಗವಂತ ಗಾವಡಾ ಹೊರತುಪಡಿಸಿ ಉಳಿದವರೆಲ್ಲರೂ ಈ ಸರ್ವೇ ಕಾರ್ಯಕ್ಕೆ ಸಾಕ್ಷಿಯಾಗಿದ್ದರು. ಸಂಜೆ ವೇಳೆ ಕೊನೆಯದಾಗಿ ಭಗವಂತ ಗಾವಡಾ ಅವರ ಮನೆ ಬಳಿ ಸರ್ವೇ ಮಾಡುತ್ತಿದ್ದರು. ಅಷ್ಟು ಹೊತ್ತು ಮನೆಯಲ್ಲಿಯೇ ಇದ್ದ ಭಗವಂತ ಗಾವಡಾ ಆಗ ಏಕಾಏಕಿ ಹೊರಗೆ ಬಂದು ದಬಾಯಿಸಿದರು.
`ಇಲ್ಲಿ ನಾನು ಸರ್ವೇ ಮಾಡಲು ಬಿಡುವುದಿಲ್ಲ’ ಎಂದು ಕೂಗಾಡಿದರು. ದರ್ಶನ ದೇಸಾಯಿ ಅವರ ಬಳಿಯಿದ್ದ ಟೇಪನ್ನು ಕಿಸಿದು ಅದನ್ನು ತುಂಡರಿಸಿದರು. ಸರ್ವೇ ಕೆಲಸಕ್ಕೆ ಅಡ್ಡಿಪಡಿಸಿ ನೌಕರರನ್ನು ಬೆದರಿಸಿದರು. ಸರ್ಕಾರಿ ಕೆಲಸಕ್ಕೆ ಅಡ್ಡಿಯಾದ ಕಾರಣ ಉತ್ಸವ ಆಚಾರಿ ಅವರು ರಾಮನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದರು.





