ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗೆ ಸಕಾಲದಲ್ಲಿ 108 ತುರ್ತು ಆರೋಗ್ಯ ಸೇವೆಯ ಆಂಬುಲೆನ್ಸ ಸಿಗದ ಕಾರಣ ರೋಗಿ ಸಾವನಪ್ಪಿದ್ದಾರೆ. ಆರೋಗ್ಯ ಸಿಬ್ಬಂದಿಯ ಅಸಡ್ಡೆಯ ಮಾತು ಕೇಳಿದ ಗೋಕರ್ಣ ಬಳಿಯ ತದಡಿಯ ಜನ ಭಾನುವಾರ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟಿಸಿದರು.
ತದಡಿಯ ಲೋಹಿತ ನಾಯ್ಕ ಅವರಿಗೆ ಭಾನುವಾರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಈ ಹಿನ್ನಲೆ ಅವರ ಕುಟುಂಬದವರು 108ಗೆ ಫೋನ್ ಮಾಡಿದ್ದರು. ಫೋನ್ ಸ್ವೀಕರಿಸಿದ ಆರೋಗ್ಯ ಸಿಬ್ಬಂದಿ ಸ್ಥಳೀಯ 108 ಸಿಬ್ಬಂದಿಗೆ ಕರೆ ವರ್ಗಾಯಿಸಿದ್ದು, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ `ತುರ್ತು ಸನ್ನಿವೇಶವಾದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಉಡಾಫೆಯಿಂದ ಮಾತನಾಡಿದ ಬಗ್ಗೆ ಕುಟುಂಬದವರು ದೂರಿದ್ದಾರೆ.
`108ಗೆ ಪದೇ ಪದೇ ಫೋನಾಯಿಸಿದರೂ ಆಂಬುಲೆನ್ಸ್ ಕಳುಹಿಸಿಲ್ಲ. ತುರ್ತು ಚಿಕಿತ್ಸೆ ಸಿಗದೇ ಲೋಹಿತ ನಾಯ್ಕ ಸಾವನಪ್ಪಿದ್ದಾರೆ’ ಎಂದು ಕುಟುಂಬದವರು ದೂರಿದರು. 108 ಸೇವೆಯ ಬಗ್ಗೆ ಸಿಡಿಮಿಡಿಗೊಂಡ ಲೋಹಿತ್ ಅವರ ಸಂಬoಧಿಕರು ಹಾಗೂ ಊರಿನವರು ಗೋಕರ್ಣ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟಿಸಿದರು. 108 ಸೇವೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.




