ಕಳೆದ ಮೂರು ವರ್ಷಗಳಿಂದ ಬಿಪಿ – ಶುಗರ್ ಹೆಚ್ಚಳದಿಂದ ಕೊರಗುತ್ತಿದ್ದ ಗಿರೀಶ ಭಾನಾವಳಿ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ.
ಶಿರಸಿ ಬಿಸಲಕೊಪ್ಪದ ಗಿರೀಶ ಭಾನಾವಳಿ (62) ಕಾರವಾರದ ಬಾಡ ಚಂದ್ರದೇವವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರೀಶ ಭಾನಾವಳಿ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೌಕರರಾಗಿದ್ದರು. ನಿವೃತ್ತಿ ನಂತರ ಅವರು ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದರು. ಬಿಪಿ ಹಾಗೂ ಶುಗರ್ ಹೆಚ್ಚಳವಾದ ಕಾರಣ ನೊಂದಿದ್ದರು. ಸದಾ ಒಂದಿಲ್ಲೊoದು ವಿಷಯದ ಬಗ್ಗೆ ಅವರು ಕೊರಗುತ್ತಿದ್ದರು.
ಕುಟುಂಬದವರು ಎಷ್ಟು ಸಮಾಧಾನ ಮಾಡಿದರೂ ಸುಮ್ಮನಿರುತ್ತಿರಲಿಲ್ಲ. ಮಾನಸಿಕ ಒತ್ತಡದಿಂದಾಗಿ ಅವರ ಆರೋಗ್ಯ ಹದಗೆಟ್ಟಿತ್ತು. ಕಾರವಾರದ ಬಾಡದ ಬಳಿಯಿರುವ ಚಂದ್ರದೇವವಾಡದಲ್ಲಿ ವಾಸವಾಗಿದ್ದ ಅವರು ಜನವರಿ 18ರಂದು ವಾಕಿಂಗ್ ಹೋಗಿ ಬರುವುದಾಗಿ ಹೇಳಿದ್ದರು. ಮನೆಯಿಂದ ಹೊರಟ ಅವರು ಎಷ್ಟು ಹೊತ್ತಾದರೂ ಮರಳಿರಲಿಲ್ಲ. ಮಧ್ಯಾಹ್ನ 1 ಗಂಟೆ ಅವಧಿಗೆ ಅವರ ಪುತ್ರ ಶುಭಂ ಭಾನಾವಳಿ ಹುಡುಕಾಟ ನಡೆಸಿದಾಗ ಅನತಿ ದೂರದಲ್ಲಿರುವ ಗೇರು ಮರಕ್ಕೆ ಗಿರೀಶ ಭಾನಾವಳಿ ನೇತಾಡುತ್ತಿದ್ದರು.
ಈ ಹಿನ್ನಲೆ ಶುಭಂ ಭಾನಾವಳಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.




