ರಸ್ತೆ ಪಕ್ಕ ಕುಳಿತು ಅಂದರ್ ಬಾಹರ್ ಆಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ನೋಡಿದ ಉಳಿದ ನಾಲ್ವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.
ಜನವರಿ 19ರ ಸಂಜೆ ಮುಂಡಗೋಡಿನ ಪಿಎಸ್ಐ ಪರಶುರಾಮ ಮಿರ್ಚಗಿ ಅವರಿಗೆ ಇಸ್ಪೀಟ್ ಆಡುತ್ತಿದ್ದವರ ವಿರುದ್ಧ ದೂರು ಬಂದಿತ್ತು. ಈ ಹಿನ್ನಲೆ ಅವರು ದೊಡ್ಡಹಾರವಳ್ಳಿ ಗ್ರಾಮದಿಂದ ಚಿಪಗೇರಿ ಮಾರ್ಗದ ಕಡೆ ಜೀಪು ತಿರುಗಿಸಿದರು. ಅಲ್ಲಿ ರಸ್ತೆ ಪಕ್ಕವೇ ರಾಜಾರೋಷವಾಗಿ ಎಂಟು ಜನ ಅಂದರ್ ಬಾಹರ್ ಆಡುತ್ತಿದ್ದರು. ದೊಡ್ಡದಾಗಿ ತಾಡಪತ್ರೆ ಹಾಸಿ ಅದರ ಮೇಲೆ ಇಸ್ಪಿಟ್ ಎಲೆಗಳ ಜೊತೆ ಹಣ ಹರಡಿ ಕೂತಿದ್ದರು.
ಪೊಲೀಸರನ್ನು ಕಂಡ ನಾಲ್ಕು ಜನ ಬೆಟ್ಟದ ಕಡೆ ಓಡಿ ಹೋಗಿ ತಪ್ಪಿಸಿಕೊಂಡರು. ಉಳಿದ ನಾಲ್ವರು 7351ರೂ ಹಣದ ಜೊತೆ ಸಿಕ್ಕಿ ಬಿದ್ದರು. ಒಟ್ಟು ಐದು ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದರು. ಕಾತೂರಿನ ಪಕ್ಕಿರೇಶ ವಡ್ಡರ್, ನಾರಾಯಣ ಕಲಾಲ, ಮೆಹಬೂಬ ಮುಜಾವರ ಅವರಿಂದ ಓಡಲು ಸಾಧ್ಯವಾಗಲಿಲ್ಲ. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಇನ್ನೂ ಮೂಡಸಾಲಿಯ ಶ್ರೀಕಾಂತ ಲಕ್ಮಾಪುರ, ಆಲಳ್ಳಿಯ ಗುಡದಯ್ಯಾ ಗೌರಕ್ಕನವರ್, ನಂದಿಪುರದ ಬಂಕಪ್ಪ ಕಾಮನಳ್ಳಿ, ಹಾನಗಲ್’ನ ಶಂಕರ್ ಗೊಲ್ಲರ್ ಹಾಗೂ ಕಾತೂರಿನ ಪಕಿರಪ್ಪ ತಳವಾರ್ ಪೊಲೀಸರಿಂದ ತಪ್ಪಿಸಿಕೊಂಡರು. ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿ ಅವರ ಬೆನ್ನು ಬಿದ್ದರೂ ಅಲ್ಲಿ-ಇಲ್ಲಿ ಮರೆಯಾಗಿ ಕಾಡು ಸೇರಿದರು. ಈ ಹಿನ್ನಲೆ ಸಿಕ್ಕಿ ಬಿದ್ದವರ ಜೊತೆ ಓಡಿ ಹೋದವರನ್ನು ಸೇರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.





