ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಗುಡ್ಡಕ್ಕೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಐದು ಜನ ಗಾಯಗೊಂಡಿದ್ದು, ಬೈಕಿನಲ್ಲಿ ಬರುತ್ತಿದ್ದ ದಿನೇಶ ನಾಯ್ಕ ಅವರೆಲ್ಲರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಹೊನ್ನಾವರದ ಮಹಿಮೆಯ ರಾಜು ನಾಯ್ಕ ಅವರು ಜನವರಿ 19ರಂದು ಮಹಿಮೆಯಿಂದ ಸಾಗರದ ಕಡೆ ಹೋಗುತ್ತಿದ್ದರು. ಉಪ್ಪೋಣಿಯಿಂದ ಮಾವಿನಗುಂಡಿ ಹೆದ್ದಾರಿಯಲ್ಲಿ ಅವರ ಕಾರು ವೇಗವಾಗಿ ಚಲಿಸಿತು. ಗೇರುಸೊಪ್ಪದ ಬಂಗಾರ ಕುಸುಮ ಜಲಪಾತಕ್ಕಿಂತ ಕೊಂಚ ಮುಂದೆ ರಾಜು ನಾಯ್ಕ ಅವರಿಗೆ ಕಾರಿನ ಮೇಲಿನ ನಿಯಂತ್ರಣ ತಪ್ಪಿತು. ಪರಿಣಾಮ ಹೆದ್ದಾರಿ ಅಂಚಿನ ಗುಡ್ಡಕ್ಕೆ ಆ ಕಾರು ಡಿಕ್ಕಿಯಾಯಿತು.
ಆ ಕಾರಿನಲ್ಲಿ ರಾಜು ನಾಯ್ಕ ಅವರ ಜೊತೆ ಪಾರ್ವತಿ ನಾಯ್ಕ, ತಿಪ್ಪಯ್ಯ ನಾಯ್ಕ, ಪ್ರದೀಪ ನಾಯ್ಕ ಹಾಗೂ ನಾಗವೇಣಿ ನಾಯ್ಕ ಎಂಬಾತರು ಚಲಿಸುತ್ತಿದ್ದರು. ಕಾರು ಡಿಕ್ಕಿಯಾದ ರಭಸಕ್ಕೆ ಅವರೆಲ್ಲರೂ ಕಾರಿನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಹೊನ್ನಾವರ ಉಪ್ಪೋಣಿ ಎಲೆಕೊಟ್ಟಿಗೆಯ ದಿನೇಶ ನಾಯ್ಕ (29) ಸ್ಥಳೀಯರ ನೆರವು ಪಡೆದು ಕಾರಿನಲ್ಲಿ ಸಿಲುಕಿದ್ದವರನ್ನು ಹೊರಗೆ ತಂದರು.
ಅದಾದ ನಂತರ ಗಾಯಗೊಂಡವರನ್ನು ಉಪಚರಿಸಿದರು. ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಕೈ ಮಾಡಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅತಿ ವೇಗವೇ ಈ ಅಪಘಾತಕ್ಕೆ ಕಾರಣವಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡರು.




