20 ವರ್ಷಗಳ ಸಾಮಾಜಿಕ ಜೀವನದಿಂದ ದೂರ ಸರಿಯಲು ನಿರ್ಧರಿಸಿದ್ದ ಉಮಾಕಾಂತ ಹೊಸಕಟ್ಟಾ ಅವರಿಗೆ ಕೊನೆಗೂ ಮೀನುಗಾರರು ನಿವೃತ್ತಿಯಾಗಲು ಬಿಡಲಿಲ್ಲ. ಸಹಕಾರಿ ಸಂಘದ ಚುನಾವಣೆಗೆ ನಿಲ್ಲಲು ಮೀನಾಮೇಷ ಎಣಿಸುತ್ತಿದ್ದ ಅವರ ಮನೆಗೆ ಮುತ್ತಿಗೆ ಹಾಕಿದ ಬೆಂಬಲಿಗರು ತದಡಿ ಮೀನುಗಾರರ ಸಹಕಾರಿ ಸಂಘದ ಚುನಾವಣೆಗೆ ಮತ್ತೆ ನಾಮಪತ್ರ ಕೊಡಿಸಿ, ಐದನೇ ಬಾರಿ ಗೆಲ್ಲಿಸಿದ್ದಾರೆ!
ಜನಪರ ಕಾಳಜಿ, ಸೌಮ್ಯ ಸ್ವಭಾವದ ಉಮಾಕಾಂತ ಹೊಸಕಟ್ಟಾ ಅವರು ಈ ಬಾರಿ ಚುನಾವಣೆಗೆ ನಿಲ್ಲದ ಬಗ್ಗೆ ನಿರ್ಧರಿಸಿದ್ದರು. ಅದನ್ನು ಅರಿತ ಅವರ ಬೆಂಬಲಿಗರು ಪದೇ ಪದೇ ಅವರ ಮನೆಗೆ ಆಗಮಿಸಿ ಮನವೊಲೈಸಿದರು. ಅನೇಕ ಮೀನುಗಾರ ಧುರಿಣರು ಸಹ ಫೋನ್ ಮಾಡಿ `ಸಹಕಾರಿ ಸಂಘಕ್ಕೆ ತಮ್ಮ ಆಡಳಿತ ಅಗತ್ಯ’ ಎಂದು ಒತ್ತಾಯಿಸಿದ್ದರು. ಕೊನೆಕ್ಷಣದವರೆಗೂ ಮೌನವಾಗಿದ್ದ ಉಮಾಕಾಂತ ಹೊಸಕಟ್ಟಾ ಅವರು ಜನರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದಲೇ ನಾಮಪತ್ರ ಸಲ್ಲಿಸಿದ್ದರು. ಅದಾದ ನಂತರ ಅವರು ಸರಿಯಾಗಿ ಪ್ರಚಾರ ಕೆಲಸವನ್ನು ಮಾಡಲಿಲ್ಲ. ಅದಾಗಿಯೂ ಅವರು ಗೆದ್ದು ಬಂದರು!
ತದಡಿ ಮೀನುಗಾರರ ಸಂಘಕ್ಕೆ ಉಮಾಕಾಂತ ಹೊಸಕಟ್ಟಾ ಅವರು ಅಧ್ಯಕ್ಷರಾಗಿದ್ದರು. `ಹೊಸಬರಿಗೂ ಇಲ್ಲಿ ಅವಕಾಶ ಸಿಗಬೇಕು’ ಎಂಬ ನಿಟ್ಟಿನಲ್ಲಿ ಸಹಕಾರಿ ಸಂಘದ ಹುದ್ದೆ ತ್ಯಜಿಸಲು ನಿರ್ಧರಿಸಿದದ್ದರು. ಆದರೆ, ಇದಕ್ಕೆ ಮೀನುಗಾರರೇ ವಿರೋಧ ವ್ಯಕ್ತಪಡಿಸಿದ್ದು, ಚುನಾವಣೆ ಮೂಲಕ ಮೀನುಗಾರರು ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ. ಉಮಾಕಾಂತ ಹೊಸಕಟ್ಟಾ ಅವರು ಕರ್ನಾಟಕ ರಕ್ಷಣಾ ವೇದಿಕೆ (ಜನಧ್ವನಿ) ಜಿಲ್ಲಾಧ್ಯಕ್ಷರೂ ಆಗಿದ್ದಾರೆ. ಸಂಘಟನೆ ದೃಷ್ಠಿಯಿಂದಲೂ ಅವರು ಸಾಕಷ್ಟು ಓಡಾಟ ನಡೆಸುತ್ತಿದ್ದಾರೆ. ಅವರ ಸೇವೆ ಗುರುತಿಸಿದ ಜನ ಮತ್ತೊಮ್ಮೆ ತದಡಿ ಮೀನುಗಾರರ ಸಹಕಾರ ಸಂಘಕ್ಕೆ ಚುನಾಯಿಸಿದ್ದು, `ಅವರ ಆಡಳಿತವೇ ಮುಂದುವರೆಯಲಿ’ ಎಂದು ಬಯಸಿದ್ದಾರೆ.




