ನೆರೆ ರಾಜ್ಯ ಗೋವಾದಲ್ಲಿ ಅಗ್ಗದ ಬೆಲೆಗೆ ಸಿಗುವ ಸರಾಯಿಯನ್ನು ತಂದು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದ ಅಪ್ಪ – ಮಗಳ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ!
ಕಾರವಾರ ಹಾಗೂ ಶಿರಸಿಯಲ್ಲಿ ಅಕ್ರಮ ಸರಾಯಿ ಮಾರಾಟಗಾರರ ಮೇಲೆ ದಾಳಿ ನಡೆದಿದೆ. ಕಾರವಾರದ ಕಡವಾಡ ಹಳೆಕೋಟೆಯ ಶಿವರಾಮ ಹುಲಸ್ವಾರ (71) ಹಾಗೂ ಅವರ ಪುತ್ರಿ ಸೀತಾ ಹುಲಸ್ವಾರ (54) ಗೋವಾಗೆ ತೆರಳಿ ಸರಾಯಿ ತಂದು ದಾಸ್ತಾನು ಮಾಡುತ್ತಿದ್ದರು. ಗೋವಾದಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರುವ ಸರಾಯಿಯನ್ನು ಅವರಿಬ್ಬರು ಕರ್ನಾಟಕದಲ್ಲಿ ದುಪ್ಪಟ್ಟು ಬೆಲೆಗೆ ಮಾರುತ್ತಿದ್ದರು.
ಈ ಮಾಹಿತಿ ಆಧರಿಸಿ ಜನವರಿ 28ರಂದು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಪಾಟೀಲ ಅವರ ಮನೆ ಬಳಿ ದಾಳಿ ಮಾಡಿದರು. ಆಗ 2400ರೂ ಮೌಲ್ಯದ ಗೋವಾ ಸರಾಯಿ ದಾಸ್ತಾನಾಗಿರುವುದು ಕಂಡು ಬಂದಿತು. ಅದನ್ನು ವಶಕ್ಕೆ ಪಡೆದು ಅಪ್ಪ-ಮಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.
ಇನ್ನೂ ಶಿರಸಿ ಕಕ್ಕಳ್ಳಿಯ ರಮೇಶ ಗೌಡ (24) ಸಹ ಅಮಿನಳ್ಳಿ ಸೇತುವೆ ಕಚ್ಚಾ ರಸ್ತೆ ಹತ್ತಿರ ಸರಾಯಿ ಮಾರಾಟ ಮಾಡುತ್ತಿದ್ದರು. ಅಲ್ಲಿ ಆಗಮಿಸುವವರಿಗೆ ಸರಾಯಿ ಸೇವನೆಗೆ ಅವಕಾಶ ಮಾಡಿಕೊಟ್ಟು ಅವರ ಆತಿಥ್ಯ ನೋಡಿಕೊಳ್ಳುತ್ತಿದ್ದರು. ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ನಿರೀಕ್ಷಕ ಸೀತಾರಾಮ ಪಿ ದಾಳಿ ನಡೆಸಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿದರು.




