ಶಿರಸಿಯ ಕದಂಬ ಮಾರ್ಕೇಟಿನಲ್ಲಿ ಮಂಗಳವಾರ ಕಾಫಿ ಬೀಜ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮೊದಲ ದಿನವೇ ಉತ್ತಮ ಬೆಲೆ ಸಿಕ್ಕಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ರೈತರು 25 ಕ್ವಿಂಟಲ್ ಕಾಫಿ ಬೀಜ ಮಾರಾಟ ಮಾಡಿದ್ದಾರೆ.
ಇಷ್ಟು ದಿನಗಳ ಕಾಲ ಬೆಂಗಳೂರಿನ ಕಾಫಿ ಬೋರ್ಡಹೊರತುಪಡಿಸಿ ಬೇರೆ ಎಲ್ಲಿಯೂ ಕಾಫಿ ಹರಾಜು ಕೇಂದ್ರ ಇರಲಿಲ್ಲ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಬೆಂಗಳೂರು ಅನಿವಾರ್ಯವಾಗಿತ್ತು. ಇದಲ್ಲದೇ, ಸ್ಥಳೀಯವಾಗಿ ಕೆಲ ಉದ್ಯಮಿಗಳು ತಾವೇ ದರ ನಿಗದಿಪಡಿಸಿ ಖರೀದಿಸುತ್ತಿದ್ದರು. ಇದೀಗ ಶಿರಸಿಯಲ್ಲಿಯೂ ಹರಾಜು ಪ್ರಕ್ರಿಯೆ ಶುರುವಾಗಿದೆ. ಇದರಿಂದ ಸಾಕಷ್ಟು ಬೆಳೆಗಾರರಿಗೆ ಅನುಕೂಲವಾಗಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 70ಟನ್ ಕಾಫಿ ಬೆಳೆಯಲಾಗುತ್ತಿದೆ. ಅದರಲ್ಲಿ ಸುಮಾರು 30 ಟನ್ ಕದಂಬ ಮಾರ್ಕೆಟಿಂಗ್ ಸಂಸ್ಥೆ ನೇರವಾಗಿ ಖರೀದಿಸುತ್ತದೆ. ಅರೆಬಿಕಾ ತಳಿಯ ಕಾಫಿ ಇಲ್ಲಿ ಹೆಚ್ಚಿಗೆ ಬೆಳೆಯುತ್ತಿದೆ. ಪ್ರಸ್ತುತ ರೊಬಸ್ಟಾ ಕ್ವಿಂಟಲ್ಗೆ 22300-23,100, ಅರೇಬಿಕಾ ಕ್ವಿಂಟಲ್ಗೆ 22,000-23600, ಕಾಫಿ (ಪಾರ್ಚಮೆಂಟ್) ಕ್ವಿಂಟಲ್’ಗೆ 46,000ರೂ ದರದಲ್ಲಿ ಮಾರಾಟವಾಗಿದೆ.
ಸ್ಥಳೀಯರ ಜೊತೆ ಹೊರಗಿನ ವ್ಯಾಪಾರಿಗಳು ಸಹ ಪೈಪೋಟಿಗೆ ಬಿದ್ದು ಕಾಫಿ ಬೀಜ ಖರೀದಿಸಿದ್ದಾರೆ. ಒಟ್ಟು 10 ಖರೀದಿದಾರರು ಭಾಗವಹಿಸಿ ತಮಗಿಷ್ಟದ ಕಾಫಿ ಬೀಜಗಳನ್ನು ಪಡೆದರು.




