ಸೊಸೈಟಿ ಸೂಪರ್ಮಾರ್ಟಿನಲ್ಲಿ ಖರೀದಿಸಿದ ವಸ್ತುವಿನ ಬಿಲ್ ವ್ಯತ್ಯಾಸವಾಗಿದ್ದರಿಂದ ಶಿರಸಿಯ ವಾನಳ್ಳಿ ಜಡ್ಡಿಗದ್ದೆ ಸೊಸೈಟಿಯ ಗುಮಾಸ್ತ ಗಿರೀಶ ಹೆಗಡೆ ಪೆಟ್ಟು ತಿಂದಿದ್ದಾರೆ!
ಶಿರಸಿ ವಾನಳ್ಳಿಯ ಗಿರೀಶ ಹೆಗಡೆ (26) ಅವರು ಮೆಣಸಿ ಸೀಮೆಯ ವಾನಳ್ಳಿ ಸೇವಾ ಸಹಕಾರಿ ಸಂಘದ ಉದ್ಯೋಗಿ. ಅವರು ಜಡ್ಡಿಗದ್ದೆಯ ಸೊಸೈಟಿ ಸೂಪರ್ ಮಾರ್ಕೇಟಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿಕೊಂಡಿದ್ದಾರೆ. ಜನವರಿ 28ರ ಸಂಜೆ ಸೊಸೈಟಿಗೆ ಬಂದ ಕಲಕದ್ದೆಯ ಚಾಲಕ ಸೋಮು ಬೋವಿವಡ್ಡರ್ ಅವರಲ್ಲಿ ಎರಡು ಚೀಲ ಸಿಮೆಂಟ್ ಕೊಡುವಂತೆ ಸೂಚಿಸಿದರು. ಜೊತೆಗೆ ಸಿಮೆಂಟ್ ಮೊತ್ತವನ್ನು ನಾಗು ಗೌಡ ಅವರ ಖಾತೆಗೆ ಖರ್ಚು ಹಾಕುವಂತೆ ತಿಳಿಸಿದರು. ಈ ಬಗ್ಗೆ ನಾಗು ಗೌಡ ಸಹ ಸೊಸೈಟಿಗೆ ಮಾಹಿತಿ ನೀಡಿರುವ ಬಗ್ಗೆ ಸೋಮು ಗೌಡ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗಿರೀಶ ಹೆಗಡೆ `ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಶಾಖಾ ವ್ಯವಸ್ಥಾಪಕರನ್ನು ಕೇಳಿ ಸಿಮೆಂಟ್ ಚೀಲ ಕೊಡುವೆ’ ಎಂದಿದ್ದರು. ಅದರ ಪ್ರಕಾರ ಸೊಸೈಟಿ ಶಾಖಾ ವ್ಯವಸ್ಥಾಪರಕನ್ನು ವಿಚಾರಿಸಿ, ಅವರ ಸೂಚನೆ ಪ್ರಕಾರ ಗಿರೀಶ ಹೆಗಡೆ ಅವರು ಸಿಮೆಂಟ್ ಚೀಲ ಕೊಟ್ಟು ಕಳುಹಿಸಿದ್ದರು. ಇದಕ್ಕೆ ಸಂಬoಧಿಸಿ ಬಿಲ್ ಪ್ರಿಂಟ್ ತೆಗೆದಾಗ ನಾಗು ಗೌಡ ಅವರ ಬದಲು ಬೇರೆಯವರ ಹೆಸರು ಮುದ್ರಣವಾಗಿತ್ತು. ಆ ಬಿಲ್ಲನ್ನು ಬೇರೆ ಗ್ರಾಹಕರಿಗೆ ನೀಡಿಯೂ ಆಗಿತ್ತು. ಸೋಮು ಬೋವಿವಡ್ಡರ್ ಅವರು ನಾಗು ಗೌಡರ ಖಾತೆಗೆ ಖರ್ಚು ಜಮಾ ಮಾಡುವಂತೆ ತಿಳಿಸಿದ್ದರೂ ಶಾಖಾ ವ್ಯವಸ್ಥಾಪಕರು ಕಣ್ತಪ್ಪಿನಿಂದ ಆ ಖರ್ಚನ್ನು ಬೇರೆಯವರ ಖಾತೆಗೆ ಹಾಕಿದ್ದರು.
ಈ ವಿಷಯ ಗಮನಕ್ಕೆ ಬಂದ ತಕ್ಷಣ ಗಿರೀಶ ಹೆಗಡೆ ಅವರು ಬೇರೆಯವರಿಗೆ ನೀಡಿದ ಬಿಲ್ಲನ್ನು ಹಿಂಪಡೆದು, ಅದನ್ನು ಸರಿಪಡಿಸಿ ಸೋಮು ಬೋವಿವಡ್ಡರ್ ಅವರಿಗೆ ನೀಡಿದ್ದರು. ಸಿಮೆಂಟ್ ಚೀಲ ಕೊಡಲು ತಡ ಮಾಡಿರುವುದು ಹಾಗೂ ಬಿಲ್’ನ್ನು ಬೇರೆಯವರ ಹೆಸರಿಗೆ ನೀಡಿದ ಕಾರಣ ಸಿಟ್ಟಾದ ಸೋಮು ಬೋವಿವಡ್ಡರ್ ಆ ಕ್ಷಣಕ್ಕೆ ಸೊಸೈಟಿ ಸಿಬ್ಬಂದಿಗೆ ಬೈದಿದ್ದರು. `ಉದ್ದೇಶಪೂರ್ವಕವಾಗಿ ನನಗೆ ಕಾಡಿಸುತ್ತೀಯಾ? ನಿನಗೆ ಇಲ್ಲಿ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲವೇ?’ ಎಂದು ಸೋಮು ಬೋವಿವಡ್ಡರ್ ಪ್ರಶ್ನಿಸಿದ್ದರು. ಆ ವೇಳೆ ಮಾತಿಗೆ ಮಾತು ಬೆಳೆದಿದ್ದು, `ಮತ್ತೊಮ್ಮೆ ಸಿಕ್ಕಾಗ ನಿನ್ನ ನೋಡಿಕೊಳ್ಳುವೆ’ ಎಂದು ಸೋಮು ಬೋವಿವಡ್ಡರ್ ಹೇಳಿ ಹೋಗಿದ್ದರು.
ಜನವರಿ 29ರಂದು ಗಿರೀಶ ಹೆಗಡೆ ಸೊಸೈಟಿ ಕೆಲಸ ಮುಗಿಸಿ ಮನೆಗೆ ಮರಳುವಾಗ ಎದುರಾದ ಸೋಮು ಬೋವಿವಡ್ಡರ್ ಅವರನ್ನು ಅಡ್ಡಗಟ್ಟಿದರು. ಹಿಂದಿನ ದಿನ ನಡೆದ ಗಲಾಟೆಯನ್ನು ಅವರು ಮರೆತಿರಲಿಲ್ಲ. ಅದೇ ಸಿಟ್ಟಿನಲ್ಲಿ ಕೂಗಾಡಿದರು. `ಸೊಸೈಟಿಗೆ ಬಂದಾಗ ನನ್ನ ಕೆಲಸ ಮಾಡಿಕೊಡದೇ ತೊಂದರೆ ಮಾಡುತ್ತೀಯಾ?’ ಎಂದು ಪ್ರಶ್ನಿಸಿ ಗಿರೀಶ ಹೆಗಡೆ ಅವರ ಬೆನ್ನ ಮೇಲೆ ಬಡಿಗೆಯಿಂದ ಬಡಿದರು. ಇದಲ್ಲದೇ `ಬೋ.. ಮಗನೆ ನನ್ನ ವಿರುದ್ಧ ಕಂಪ್ಲೇಟ್ ಕೊಡುವುದಾದರೆ ಕೊಡು. ಆಗ ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಬೈದು ಬೆದರಿಸಿದರು. ಅದಾಗಿಯೂ ಗಿರೀಶ ಹೆಗಡೆ ಧೈರ್ಯದಿಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





