ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕು-ಸೊಸೈಟಿಗಳ ಹಗರಣ ಮುಂದುವರೆದಿದೆ. ಬ್ಯಾಂಕ್ ನೌಕರರೇ ಅಪರಾತಪರ ನಡೆಸಿ ಪರಾರಿಯಾಗುತ್ತಿರುವುದು ಸಾಮಾನ್ಯವಾಗಿದೆ. ಹಣಕಾಸು ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಕೊರತೆ ಕಾರಣ ಜನ ಠೇವಣಿಯಿರಿಸಲು ಹಿಂದೆ ಮುಂದೆ ನೋಡುತ್ತಿದ್ದು, ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಠೇವಣಿವಿಟ್ಟವರ ಪರಿಸ್ಥಿತಿ ಚಿಂತಾಜನಕವಾಗಿದೆ.
ಕಾರವಾರ ಅರ್ಬನ್ ಬ್ಯಾಂಕ್ ಮುಳುಗಿ 9 ತಿಂಗಳು ಕಳೆದಿದ್ದು, ನೀಡಿದ ಭರವಸೆಯಂತೆ ಉಳಿತಾಯ ಖಾತೆಯಲ್ಲಿದ್ದ ಹಣ ಸಹ ಗ್ರಾಹಕರಿಗೆ ಸಿಕ್ಕಿಲ್ಲ. ಠೇವಣಿ ಇಟ್ಟವರಿಗೂ ವಿಮಾ ಪರಿಹಾರ ಸಿಕ್ಕಿಲ್ಲ. ಅದಾಗಿಯೂ ಅವ್ಯಹಾರಕ್ಕೆ ಕಾರಣವಾದ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು `60 ಲಕ್ಷ ವಿಮಾ ಹಣ ಬಂದಿದೆ’ ಎಂದು ಪುಕಾರು ಹಬ್ಬಿಸಿದ್ದಾರೆ. ಹೀಗಾಗಿ ಬ್ಯಾಂಕಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ವಿಮಾ ಹಣ ಕೊಡಿಸುವಾಗಲೂ ಈ ಅರ್ಬನ್ ಬ್ಯಾಂಕ್ನ ಕೆಲ ನಿರ್ದೇಶಕರು `ತಮ್ಮ ಸಂಬAಧಿಗಳಿಗೆ ವಿಮಾ ಹಣ ಕೊಡಿಸುತ್ತಿದ್ದು, ಇತರರನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂಬ ದೂರು ಕೇಳಿ ಬರುತ್ತಿದೆ.
ಈವರೆಗೂ ವಿಮಾ ಹಣ ಬಾರದ ಹಿನ್ನಲೆಯಲ್ಲಿ ಠೇವಣಿ ಇಟ್ಟು ಹಣ ಕಳೆದುಕೊಂಡವರು ಅತಂತ್ರರಾಗಿದ್ದಾರೆ. ಠೇವಣಿದಾರರು ನಿತ್ಯ ಬ್ಯಾಂಕಿಗೆ ಆಗಮಿಸಿ ಹಣ ಹಿಂತಿರುಗಿಸುವ ಬಗ್ಗೆ ಕೇಳುತ್ತಿದ್ದು, ಅಲ್ಲಿನ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಜನರ ಅಳಲು ಆಲಿಸಲು ಆ ಬ್ಯಾಂಕಿನಲ್ಲಿ ಕನ್ನಡ ಮಾತನಾಡುವ ಮ್ಯಾನೇಜರ್ ಸಹ ಇಲ್ಲ!
`ಎಲ್ಲರ ಹಣದ ವಿವರವನ್ನು ವಿಮಾ ಕಂಪನಿಗೆ ಕಳಿಸಲಾಗಿದೆ. ಆದರೂ ಸುಮಾರು 3 ಸಾವಿರದಷ್ಟು ಜನರ ವಿವರಗಳನ್ನು ಕಳಿಸುವುದು ಬಾಕಿ ಇದೆ’ ಎಂದು ಬ್ಯಾಂಕಿನವರು ಹೇಳುತ್ತಿದ್ದಾರೆ. `ಪ್ರತಿ ದಿನ 100ರಿಂದ 200 ಜನರ ವಿವರಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗುತ್ತಿದೆ. ಬರುವ ಸೋಮವಾರದ ವೇಳೆಗೆ ಬ್ಯಾಂಕಿನ ಲೆಕ್ಕಪರಿಶೋಧಕರು ಎಲ್ಲ ಕಾಗದಗಳಿಗೂ ಸಹಿ ಹಾಕುವರು’ ಎಂದು ಗ್ರಾಹಕರನ್ನು ಸಮಾಧಾನ ಮಾಡುತ್ತಿದ್ದಾರೆ. ಅದಾಗಿಯೂ ಜನ ಸಿಟ್ಟಾದಾಗ ಬ್ಯಾಂಕಿನ ಸಿಬ್ಬಂದಿ ಪೊಲೀಸರನ್ನು ಕರೆಯಿಸಿ ಜನರನ್ನು ಅಲ್ಲಿಂದ ಕಳುಹಿಸುತ್ತಿದ್ದಾರೆ.
ಬ್ಯಾಂಕಿನ ಅವ್ಯವಹಾರದ ವಿರುದ್ಧ ಜನ ಈಗಾಗಲೇ ಪೊಲೀಸ್ ದೂರು ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಸಹ ಮನವಿ ಸಲ್ಲಿಸಿ ಬೇಡಿಕೊಂಡಿದ್ದಾರೆ. ಅನೇಕರು ಆ ಬ್ಯಾಂಕಿನ ಬಡ್ಡಿ ಹಣದಿಂದ ಬದುಕು ಕಟ್ಟಿಕೊಂಡಿದ್ದು, ಅವರೆಲ್ಲರೂ ಸಾಲದ ಸುಳಿಗೆ ಸಿಲುಕಿ ಇನ್ನಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ.





