ಕಾನ್ಸರ್ ರೋಗದಿಂದ ಬಳಲಿ ಚಿಕಿತ್ಸೆ ಪಡೆದಿರುವ ಕಮಲಾ ಹೊಕಳೆ ಅವರಿಗೆ ಮುಖ್ಯಮಂತ್ರಿ ವೈದ್ಯಕೀಯ ನಿಧಿಯಿಂದ ನೆರವು ನೀಡುವಂತೆ ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕುಮಟಾ ಹೊಲನಗದ್ದೆ ಗ್ರಾಮದ ಕಮಲಾ ಹೋಕಳೆ ಅವರು ಸ್ಥನ ಕಾನ್ಸರಿನಿಂದ ಬಳಲುತ್ತಿದ್ದರು. ಆರ್ಥಿಕವಾಗಿ ಹಿಂದುಳಿದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ರೋಗ ವಾಸಿ ಆಗುವುದಕ್ಕಾಗಿ ಲಕ್ಷಾಂತರ ರೂ ವೆಚ್ಚವಾಗಿದ್ದು, ಅದರಲ್ಲಿ ಅಲ್ಪ ಪ್ರಮಾಣದ ಹಣ ಆರೋಗ್ಯ ಕಾರ್ಡಿನ ಮೂಲಕ ಆಸ್ಪತ್ರೆಗೆ ಸಂದಾಯವಾಗಿದ್ದು, ಉಳಿದ ಹಣವನ್ನು ಸಾಲ ಮಾಡಿ ಪಾವತಿಸಿದ್ದರು.
ಸಾಲ ಮರುಪಾವತಿ ಕಾರಣಕ್ಕಾಗಿ ಅವರು ನೆರವು ಯಾಚಿಸಿ ಜ 31ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಬಂದರು. ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಕಮಲಾ ಹೊಕಳೆ ಅವರನ್ನು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಮನೆಗೆ ಕರೆದೊಯ್ದರು. ಪರಿಸ್ಥಿತಿ ಆಲಿಸಿದ ಶಾರದಾ ಶೆಟ್ಟಿ ಅವರು ಮುಖ್ಯಮಂತ್ರಿ ವೈದ್ಯಕೀಯ ನಿಧಿಗಾಗಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದರು.
`ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಮುಂಚೂಣಿಯಲ್ಲಿದೆ. ಬಡವರಿಗೆ ಆಹಾರದ ಕಿಟ್ ನೀಡುವ ಕಾರ್ಯವೂ ಇತರರಿಗೆ ಮಾದರಿ. ಬಡವರ ಸಮಸ್ಯೆಗಳಿಗೆ ನಾನೂ ಸದಾ ಸ್ಪಂದಿಸುವೆ’ ಎಂದು ಶಾರದಾ ಶೆಟ್ಟಿ ಅವರು ಹೇಳಿದರು.




