ಅಡಿಕೆ ಬೆಳೆಗಾರರನ್ನು ಒಳಗೊಂಡು ರೈತರು ಸಮಯಕ್ಕೆ ಸರಿಯಾಗಿ ವಿಮಾ ಕಂತು ಪಾವತಿಸಿದರೂ ವಿಮಾ ಕಂಪನಿ ಸಮಯಕ್ಕೆ ಸರಿಯಾಗಿ ಪರಿಹಾರವನ್ನು ಒದಗಿಸುತ್ತಿಲ್ಲ. `ಎರಡು ವಾರದೊಳಗೆ ವಿಮಾ ಪರಿಹಾರ ರೈತರ ಖಾತೆಗೆ ಜಮಾ ಆಗಲಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದ್ದು, ಅವರು ಹೇಳಿದ ಸಮಯದೊಳಗೂ ಹಣ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.
ಪ್ರಸಕ್ತ ಸಾಲಿನಲ್ಲಿ ಅತಿವೃಷ್ಠಿಯಿಂದ ಅಪಾರ ಪ್ರಮಾಣದಲ್ಲಿ ಫಸಲು ನಾಶವಾಗಿದೆ. ಅದಾಗಿಯೂ ರೈತರಿಗೆ ನ್ಯಾಯವಾಗಿ ದೊರೆಯಬೇಕಾದ ಬೆಳೆ ವಿಮಾ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ವಿಮಾ ಕಂಪನಿ ಸಹ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ವಿತರಣೆ ಮಾಡದೇ ನುಣಚಿಕೊಳ್ಳುತ್ತಿದೆ. ಈ ಹಿನ್ನಲೆ ಎಲ್ಲಾ ಕಡೆ ರೈತರ ಆಕ್ರೋಶ ಹೆಚ್ಚಾಗಿದೆ.
ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ರೈತರು ಕೆಲ ದಿನದ ಹಿಂದೆ ಶಿರಸಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅದಾದ ನಂತರ ಮುಂಡಗೋಡದಲ್ಲಿಯೂ ಪ್ರತಿಭಟನೆ ನಡೆದಿದೆ. ಈ ವೇಳೆ ಅಧಿಕಾರಿಗಳು ಪರಿಹಾರ ಒದಗಿಸುವ ಭರವಸೆ ನೀಡಿದ್ದು, ನಂತರ ಆ ಭರವಸೆಯನ್ನು ಮರೆತಿದ್ದರು. ಹೀಗಾಗಿ ಇದೀಗ ಮತ್ತೆ ರೈತ ಸಂಘಟನೆಯವರು ಒಟ್ಟಾಗಿ ವಿಮಾ ಕಂಪನಿಗೆ ಆಕ್ರೋಶದ ಬಿಸಿ ಮುಟ್ಟಿಸಿದ್ದಾರೆ.
ಕೃಷಿ, ತೋಟಗಾರಿಕೆ, ಕಂದಾಯ, ಹಸ್ಕಾಂ ಅರಣ್ಯ ಮತ್ತು ಕ್ಷೇಮಾ ವಿಮೆ ಕಂಪನಿಯ ಮುಖ್ಯಾಧಿಕಾರಿಗಳ ಜೊತೆ ಮುಂಡಗೋಡ ತಹಶೀಲ್ದಾರರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ ರೈತರು `ಬೇರೆ ಬೇರೆ ಜಿಲ್ಲೆಯಲ್ಲಿ ವಿಮೆ ಪರಿಹಾರ ಕೊಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯವರಿಗೆ ಯಾಕೆ ಸಿಕ್ಕಿಲ್ಲ?’ ಎಂದು ಪ್ರಶ್ನಿಸಿದ್ದಾರೆ. `ಹವಾಮಾನ ಇಲಾಖೆ ಹಾಗೂ ವಿಮಾ ಕಂಪನಿ ನಡುವಿನ ಸಮಸ್ಯೆಯಿಂದ ವಿಮಾ ಪರಿಹಾರ ಒದಗಿಸಲು ತೊಂದರೆಯಾದ ಬಗ್ಗೆ ಸಭೆಯಲ್ಲಿದ್ದ ವಿಮಾ ಕಂಪನಿ ಅಧಿಕಾರಿ ಅಮರನಾಥ ರೆಡ್ಡಿ ಹೇಳಿದ್ದು, ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಹವಾಮಾನ ಇಲಾಖೆ ನೀಡಿರುವ ವರದಿಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಇದರಿಂದ ವಿಮಾ ಪರಿಹಾರ ನೀಡಲು ವ್ಯತ್ಯಾಸವಾಗಿದೆ’ ಎಂದು ವಿಮಾ ಕಂಪನಿಯವರು ಹೇಳಿದ್ದು, ಇದಕ್ಕೆ ಸಮಜಾಯಿಶಿ ಕೊಡಲು ಹವಾಮಾನ ಇಲಾಖೆ ಅಧಿಕಾರಿಗಳು ಸಭೆಯಲ್ಲಿರಲಿಲ್ಲ. `ಮಳೆ ಮಾಪನ ಅಧಿಕಾರಿಗಳು ಸರಿಯಾಗಿ ವರದಿ ನೀಡಿದರೆ ರೈತರಿಗೆ ಹೆಚ್ಚಿನ ಮೊತ್ತದ ವಿಮೆ ನೀಡಬೇಕಾಗುತ್ತದೆ. ಹೀಗಾಗಿ ಉದ್ದೇಶಪೂರ್ವಕವಾಗಿ ವಿಮಾ ಕಂಪನಿ ಕಾಡಿಸುತ್ತಿದೆ’ ಎಂದು ರೈತರು ಅಸಮಧಾನಹೊರಹಾಕಿದರು. ಕೊನೆಗೆ `20 ದಿನಗಳ ಒಳಗೆ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ ಆಗದೇ ಇದ್ದರೆ ಉಗ್ರ ಪ್ರತಿಭಟನೆ ಅನಿವಾರ್ಯ’ ಎಂದು ಮುಂಡಗೋಡದಲ್ಲಿ ನಡೆದ ಸಭೆಯಲ್ಲಿ ರೈತರು ಎಚ್ಚರಿಕೆ ನೀಡಿದ್ದಾರೆ.




