ಹಲವು ಊರಿನ ಸಂಪರ್ಕ ಬೆಸೆಯುವ ಬಾಂದಾರು ಹಾಗೂ ಸೇತುವೆ ಕೆಲಸಕ್ಕೆ ಶಿರಸಿಯಲ್ಲಿ ವಿರೋಧ ವ್ಯಕ್ತವಾಗಿದೆ. ಆ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ ಹಲವು ಗ್ರಾಮೀಣ ಭಾಗದ ಜನ ಶುಕ್ರವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿ ಕೆಲಸ ನಿಲ್ಲಿಸದಂತೆ ಹಕ್ಕೊತ್ತಾಯ ಮಾಡಿದರು.
ಶಿರಸಿ ತಾಲೂಕಿನ ಹೆಬ್ಬಲಸು ಬಳಿ ಬಾಂದಾರು ಹಾಗೂ ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದೆ. 2022ರಲ್ಲಿ ಈ ಕಾಮಗಾರಿಗಾಗಿ 2 ಕೋಟಿ ರೂ ಮಂಜೂರಿಯಾಗಿತ್ತು. ಇದೀಗ ಕೆಲಸ ಶುರುವಾಗಿದ್ದು, ವಿರೋಧಿಗಳ ಒತ್ತಡಕ್ಕೆ ಮಣಿಯದೇ ಕೆಲಸ ಮುಂದುವರೆಸಬೇಕು ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ.
ಈ ಕಾಮಗಾರಿಯೂ ನೆಗ್ಗು ಗ್ರಾಮ ಪಂಚಾಯಿತಿ ಹಾಗೂ ಜಾನ್ಮನೆ ಗ್ರಾಮ ಪಂಚಾಯಿತಿಯನ್ನು ಜೋಡಿಸುತ್ತದೆ. ಸದ್ಯ ನೆಬ್ಬೂರು, ರೇವಣಕಟ್ಟಾ ಭಾಗದ ಜನ ಹೇರೂರು ರಸ್ತೆ ಸಂಪರ್ಕ ಪಡೆಯಲು ಅಮ್ಮಿನಳ್ಳಿ, ಕೊಳಗಿಬೀಸ್ ಮೂಲಕ ತೆರಳುತ್ತಿದ್ದು, ಇಲ್ಲಿ ಸೇತುವೆ ನಿರ್ಮಾಣವಾದ ನಂತರ 10ಕಿಮೀ ದೂರದ ಪ್ರಯಾಣ ಕಡಿಮೆಯಾಗಲಿದೆ.
`ಈ ಭಾಗದ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯವೂ ಸಿಗಲಿದೆ. ಕೃಷಿ ಭೂಮಿಗೆ ಈ ಯೋಜನೆಯಿಂದ ಯಾವುದೇ ಸಮಸ್ಯೆ ಇಲ್ಲ. ನೆಬ್ಬೂರು ಭಾಗದ ವಿದ್ಯಾರ್ಥಿಗಳಿಗೂ ಕೊಳಗಿಬೀಸ್ ಕಾಲೇಜುಮ ತಟ್ಟಿಕೈ ಪ್ರೌಢಶಾಲೆ ಈ ಸೇತುವೆಯಿಂದ ಸನೀಹ’ ಎಂದು ನೆಗ್ಗು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಾಯಕ ಹೆಗಡೆ ಹೆಬ್ಬಲಸು ವಿವರಿಸಿದರು.




