ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯ ಬ್ಯಾಂಕು-ಸಹಕಾರಿ ಸಂಘ ಸಂಸ್ಥೆಗಳಿದ್ದರೂ ಅನೇಕರು ಅನಧಿಕೃತವಾಗಿ ಖಾಸಗಿ ಸಾಲ ಕೊಡುತ್ತಿದ್ದಾರೆ. ಸಾವಿರ ಸಾವಿರ ಜನ ಈ ರೀತಿ ಸಾಲ ಪಡೆಯುವಲ್ಲಿ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಕೊನೆಗೆ ಮೀಟರ್ ಬಡ್ಡಿ ಸಾಲ ತೀರಿಸಲಾಗದೇ ಸಾವಿಗೆ ಶರಣಾಗುತ್ತಿದ್ದಾರೆ.
ಖಾಲಿ ಚೆಕ್ಕು, ಆಭರಣ, ಮನೆ ಪತ್ರ ಸೇರಿ ವಿವಿಧ ದಾಖಲೆಗಳನ್ನು ಅಡವಿಟ್ಟುಕೊಂಡು ಸಾಲ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸರ್ಕಾರದ ನಿಯಮಗಳೆಲ್ಲವನ್ನು ಗಾಳಿಗೆ ತೂರಿ ಖಾಸಗಿ ವ್ಯಕ್ತಿಗಳು ಸಾಲ ನೀಡುತ್ತಿದ್ದಾರೆ. ಬೆಳಗ್ಗೆ ಸಾಲಪಡೆದು ಸಂಜೆ ಬಡ್ಡಿ ಜೊತೆ ಸಾಲ ಮರುಪಾವತಿ ಮಾಡುವ ಹೂ-ಹಣ್ಣು ವ್ಯಾಪಾರಿಗಳು, ಗೂಡಂಗಡಿಕಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಾರ್ಷಿಕ ಸಾಲ, ಮಾಸಿಕ ಸಾಲ ಪಡೆಯುವವರೇನೂ ಕಡಿಮೆ ಇಲ್ಲ.
ಬಡ್ಡಿಕೋರನನ್ನು ಅಪಹರಿಸಿದ ಸಾಲಗಾರರು!
ಮುಂಡಗೋಡಿನ ಜಮೀರ ದರ್ಗಾವಾಲೆ ಸಹ ಖಾಸಗಿ ಸಾಲ ನೀಡುತ್ತಿದ್ದರು. 1 ಲಕ್ಷ ರೂ ಸಾಲಪಡೆದವರು ಪ್ರತಿ ತಿಂಗಳು 30 ಸಾವಿರ ರೂ ಬಡ್ಡಿ ಕೊಡಬೇಕಿತ್ತು. ಜಮೀರ್ ಕಡೆ ಹುಡುಗರು ಸಾಲಗಾರರಿಗೆ ನಿತ್ಯ ಹಿಂಸಿಸುತ್ತಿದ್ದರು. ಈ ಪೈಕಿ ಖ್ವಾಜಾ ಎಂಬಾತ ಇನ್ನಷ್ಟು ಸಾಲಕ್ಕೆ ಬೇಡಿಕೆ ಇಟ್ಟರೂ ಜಮೀರ್ ಕೊಟ್ಟಿರಲಿಲ್ಲ. ಈ ಮೊದಲು ನೀಡಿದ ಸಾಲಕ್ಕೆ ಬಡ್ಡಿ ವಸೂಲಿ ಮಾಡುವುದನ್ನು ಬಿಟ್ಟಿರಲಿಲ್ಲ.
ಬಡ್ಡಿ ಕೊಟ್ಟು ಅಸಲು ಪಾವತಿಸಲಾಗದ ಸಾಲಗಾರ ಖ್ವಾಜಾ ತನ್ನ ಸಹಚರರ ಜೊತೆ ಸೇರಿ ಸಾಲ ನೀಡಿದ ಜಮೀರ್ ದರ್ಗಾವಾಲೆಯನ್ನು ಅಪಹರಿಸಿ 31 ಲಕ್ಷ ರೂ ಬೇಡಿಕೆ ಇಟ್ಟಿದ್ದರು. ಕೊನೆಗೆ 18 ಲಕ್ಷ ರೂಪಾಯಿ ಪಡೆದಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ದಾಳಿ ನಡೆದಿದ್ದು-ಪೊಲೀಸರು ಪ್ರತಿ ದಾಳಿ ನಡೆಸಿದ್ದು ಹಳೆಯ ಸುದ್ದಿ!
ಅಸಲು ಬೇಡ.. ಬಡ್ಡಿ ಸಾಕು!
ಅನಧಿಕೃತವಾಗಿ ಖಾಸಗಿ ಸಾಲ ಕೊಡುತ್ತಿರುವವರು ಅನೇಕ ಕಡೆ ಸಾಲ ನೀಡಿದವರಿಂದ ಅಸಲು ಹಣ ಪಡೆಯುತ್ತಿಲ್ಲ. ಸಾಲಗಾರರು ಎಷ್ಟೇ ಹಣ ಪಾವತಿ ಮಾಡಿದರೂ ಅದು ಅಸಲಿಗೆ ಜಮಾ ಆಗುತ್ತಿಲ್ಲ. ಅಸಲು ಪಾವತಿಸಲು ಬಂದವರಿಗೆ ಸಹ `ಆ ಹಣ ಆಮೇಲೆ ನೋಡಣ. ಈ ತಿಂಗಳ ಬಡ್ಡಿ ಕಟ್ಟಿ ಸಾಕು’ ಎನ್ನುವ ಸಾಲ ನೀಡುವವರೇ ಹೆಚ್ಚಿದ್ದಾರೆ. ಇನ್ನೂ ಅನೇಕ ಕಡೆ ಸಾಲಗಾರರು ಅಸಲು ಪಾವತಿ ಮಾಡಿದರೂ `ಈ ಹಣ ಬಡ್ಡಿಗೆ ಸರಿ ಹೊಯ್ತು’ ಎನ್ನುತ್ತಿದ್ದಾರೆ.
ಎಲ್ಲಾ ಕಡೆ ಇದೇ ಗೋಳು!
ಕಾರವಾರ, ಕುಮಟಾ, ಶಿರಸಿ, ಹೊನ್ನಾವರ, ಯಲ್ಲಾಪುರದಲ್ಲಿಯೂ ಖಾಸಗಿ ಸಾಲ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. `ರಾತ್ರಿ 12 ಗಂಟೆಗೆ ಹೋದರೂ ಆತ ಸಾಲ ಕೊಡುತ್ತಾನೆ. ಅವನೇ ನಮ್ಮ ದೇವರು’ ಎಂಬ ಸಾಲಗಾರರ ಭಕ್ತರು ಹೆಚ್ಚಿದ್ದಾರೆ. ಕೆಲವರು ಪಡೆದ ಸಾಲವನ್ನು ಅವಧಿ ಮುಗಿಯುವ ಮುನ್ನವೇ ತಿರಿಸಿ ಮತ್ತೆ ಹೊಸ ಸಾಲ ಪಡೆಯುತ್ತಿದ್ದಾರೆ.
ಶಾಸಕರ ಸಭೆಯಲ್ಲಿ ಬಡ್ಡಿ ಹೈಕಳ ಹೆಸರು
ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ನಡೆಸಿದ ಸಭೆಯಲ್ಲಿ ಅನೇಕರು ಬಡ್ಡಿ ಹೈಕಳ ಹೆಸರು ಹೇಳಿದ್ದಾರೆ. `ಅವರ ಉಪಟಳದಿಂದ ನಮ್ಮನ್ನು ರಕ್ಷಿಸಿ’ ಎಂದು ಅಂಗಲಾಚಿದ್ದಾರೆ. `ಅಂಬಿಕಾನಗರದಿAದ ಹಳಿಯಾಳಕ್ಕೆ ಬಂದಿರುವ ಮಾದರಿ ಗುನ್ನೆಗಾರ, ರಾಕೇಶ ವಾಲೇಕರ ಹಾಗೂ ಆತನ ಸಂಗಡಿಗರಿAದ ನಡೆಯುತ್ತಿರುವ ಅಕ್ರಮ ಬಡ್ಡಿ ವ್ಯವಹಾರದಿಂದ ಮುಕ್ತಿಕೊಡಿ’ ಎಂದು ಮನವಿ ಮಾಡಿದ್ದಾರೆ.
`ಎಲ್ಲಡೆ ಬಡ್ಡಿ ವ್ಯವಹಾರ ನಡೆಸುವವರ ಹಾವಳಿ ಹೆಚ್ಚಾಗಿದೆ. ಸಾಲದ ಹತ್ತು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇಂಥ ಕಾನೂನುಬಾಹಿರ ಕೆಲಸವನ್ನು ನಾನು ಸಹಿಸುವುದಿಲ್ಲ’ ಎಂದು ಆರ್ ವಿ ದೇಶಪಾಂಡೆ ಗುಡುಗಿದ್ದಾರೆ. `ಬಡ್ಡಿ ಮಾಫಿಯಾದಿಂದ ಕಿರಿಕುಳ ಆದರೆ ತಾಲೂಕು ಆಡಳಿತಕ್ಕೆ ಹಾಗೂ ಪೊಲೀಸರಿಗೆ ದೂರು ಕೊಡಿ’ ಎಂದವರು ಹೇಳಿದ್ದಾರೆ. `ದೂರು ಕೊಟ್ಟವರ ಹೆಸರನ್ನು ಗೌಪ್ಯವಾಗಿರಿಸಿ’ ಎಂದು ಅಧಿಕಾರಿಗಳಿಗೂ ಸೂಚಿಸಿದ್ದಾರೆ.





