ನಿರಂತರವಾಗಿ ಜನ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದ ಹಿನ್ನಲೆ ಅರಣ್ಯ ಇಲಾಖೆಯವರು ನೀಡಿದ ಬೋನು ಬಳಸಿಕೊಂಡು ಊರಿನವರೇ ಚಿರತೆಯನ್ನು ಸೆರೆ ಹಿಡಿದಿದ್ದರು. ಆದರೆ, ಆ ದಿನ ಬೋನಿಗೆ ಬಿದ್ದಿದ್ದು ನರಭಕ್ಷಕ ಚಿರತೆ ಅಲ್ಲ ಎಂದು ಇದೀಗ ಅರಿವಾಗಿದೆ. ಕಾರಣ, ನರಭಕ್ಷಕ ಚಿರತೆಯ ಅಟ್ಟಹಾಸ ಶುಕ್ರವಾರ ರಾತ್ರಿಯೂ ಮುಂದುವರೆದಿದೆ.
ಹೊನ್ನಾವರದ ಕರ್ಕಿಯಲ್ಲಿ ವಾಸವಾಗಿರುವ ಪ್ರಶಾಂತ ಹೆಗಡೆ ಅವರ ಮೇಲೆ ಚಿರತೆ ದಾಳಿ ನಡೆಸಿದೆ. ಪ್ರಶಾಂತ ಹೆಗಡೆ ಅವರು ವಿವಿಧ ಅಂಗಡಿಗಳಿಗೆ ಬಗೆ ಬಗೆಯ ಸಾಮಗ್ರಿ ಸರಬರಾಜು ಮಾಡುತ್ತಾರೆ. ಶುಕ್ರವಾರ ಕೆಲಸ ಮುಗಿದ ನಂತರ ಅವರು ರಾತ್ರಿ ಹೊನ್ನಾವರದ ತಮ್ಮ ಮಾವನ ಮನೆಗೆ ಬರುವವರಿದ್ದರು. ಕಾರಿನಲ್ಲಿ ಹೊರಟ ಅವರು ಸಂತೆಗುಳಿಯ ತಿರುವಿನಲ್ಲಿ ಮೂತ್ರ ವಿಸರ್ಜನೆಗೆ ನಿಂತಿದ್ದರು. ಆ ವೇಳೆ ಪ್ರಶಾಂತ ಹೆಗಡೆ ಅವರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ.
ಚಿರತೆ ದಾಳಿಯಿಂದ ತತ್ತರಿಸಿದ ಪ್ರಶಾಂತ ಹೆಗಡೆ ಅವರು ದೊಡ್ಡದಾಗಿ ಬೊಬ್ಬೆ ಹಾಕಿದ್ದಾರೆ. ಕಾರಿನಿಂದ ಹೊಮ್ಮಿದ ಲೈಟಿಗೆ ಕಣ್ಣು ಮಿಟುಕಿಸಿದ ಚಿರತೆ ಬೊಬ್ಬೆ ಕೇಳಿ ಅಲ್ಲಿಂದ ಓಡಿದೆ. ಅದಾದ ನಂತರ ಸುದಾರಿಸಿಕೊಂಡ ಅವರು ಕಾರು ಏರಿ ಜಡ್ಡಿಗದ್ದೆಯ ಜಿ ಆರ್ ಹೆಗಡೆ ಅವರ ಮನೆ ತಲುಪಿದರು. ಚಿರತೆ ದಾಳಿಯಿಂದ ತತ್ತರಿಸಿದ ಅವರನ್ನು ಮನೆಯವರೆಲ್ಲರೂ ಸೇರಿ ಆಸ್ಪತ್ರೆಗೆ ದಾಖಲಿಸಿದರು. ವನ್ಯಜೀವಿ ಆಕ್ರಮಣದಿಂದ ಪ್ರಶಾಂತ ಹೆಗಡೆ ಅವರ ಮುಖ ಹಾಗೂ ಭುಜಕ್ಕೆ ಗಾಯಗಳಾಗಿವೆ.
ಮಾನವನ ಮೇಲೆ ವನ್ಯಜೀವಿ ಆಕ್ರಮಣದ ಸುದ್ದಿ ಕೇಳಿ ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬಂದು ಗಾಯಾಳುವಿನ ಆರೋಗ್ಯ ವಿಚಾರಿಸಿದರು. `ವಾರದ ಹಿಂದೆ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆಯೂ ಚಿರತೆ ದಾಳಿ ನಡೆಸಿದೆ’ ಎಂದು ಜಡ್ಡಿಗದ್ದೆಯ ಜಿ ಆರ್ ಹೆಗಡೆ ಅವರು ವಿವರಿಸಿದರು.
ಎರಡು ವಾರದ ಹಿಂದೆ ಚಿರತೆ ಬೋನಿಗೆ ಬಿದ್ದ ತುಸು ದೂರದಲ್ಲಿಯೇ ಈ ದಾಳಿ ನಡೆದಿದೆ. ಈ ಹಿನ್ನಲೆ ಮತ್ತೆ ಬೋನುಗಳನ್ನು ಇರಿಸಿ ಚಿರತೆ ಸೆರೆಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ. ವಂದೂರು, ಸಂತೆಗುಳಿ, ಸಾಲ್ಕೋಡ, ಹೊಸಾಕುಳಿ ಭಾಗದಲ್ಲಿ ಚಿರತೆ ದಾಲಿ ನಿರಂತರವಾಗಿದೆ. ತಿಂಗಳ ಹಿಂದೆ ಬೈಕಿನಲ್ಲಿ ಹೋಗುವವರನ್ನು ಸಹ ಅಟ್ಟಾಡಿಸಿಕೊಂಡು ಬಂದು ಚಿರತೆ ದಾಳಿ ನಡೆಸಿತ್ತು.





