ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನಡೆಯಬೇಕು ಎಂಬುದು ಸರ್ಕಾರದ ಉದ್ದೇಶ. ಆದರೆ, ಯಲ್ಲಾಪುರದ ತಾಲೂಕು ಪಂಚಾಯತ ಅಧಿಕಾರಿ-ಸಿಬ್ಬಂದಿ ಸರ್ಕಾರಿ ಕಾರ್ಯಕ್ರಮದ ನೆಪದಲ್ಲಿ ರೆಸಾರ್ಟಿಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾರೆ. ತಮ್ಮ ಮೇಲಧಿಕಾರಿಗಳನ್ನು ರೆಸಾರ್ಟಿಗೆ ಕರೆಯಿಸಿ ಅವರ ಸೇವೆ ಮಾಡಿ, ಪ್ರಶಂಸೆಯ ಪ್ರಶಸ್ತಿಯನ್ನೂ ಪಡೆದಿದ್ದಾರೆ!
ಯಲ್ಲಾಪುರದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜನೆಗೆ ಉತ್ತಮ ಕಟ್ಟಡಗಳಿವೆ. ತಾಲೂಕು ಪಂಚಾಯತ ಆವರಣದಲ್ಲಿನ ಸಭಾ ಭವನ ಸಹ ಅತ್ಯಂತ ಅಚ್ಚುಕಟ್ಟಾಗಿದೆ. ಹೀಗಾಗಿ ಶಾಸಕ-ಸಚಿವರು ಬಂದರೂ ಇಲ್ಲಿಯೇ ಅಧಿಕಾರಿಗಳ ಸಭೆ ನಡೆಸುತ್ತಾರೆ. ಆದರೆ, ಶಾಸಕ-ಸಚಿವರಿಗಿಂತಲೂ ಐಷಾರಾಮಿ ಬದುಕು ಬಯಸಿದ ಅಧಿಕಾರಿಗಳು ಖಾಸಗಿ ರೆಸಾರ್ಟಿಗೆ ತೆರಳಿ ಕಾರ್ಯಕ್ರಮ ನಡೆಸಿದ್ದಾರೆ. ರೆಸಾರ್ಟಿನಲ್ಲಿ ಮೋಜು ಮಸ್ತಿ ನಡೆಸಲು ಉದ್ದೇಶಿಸಿದ ಅಧಿಕಾರಿಗಳಿಗೆ ಸರ್ಕಾರದ ಅಧೀನದಲ್ಲಿರುವ `ಡಮಾಮಿ ಹೋಂ ಸ್ಟೇ’ ಸಹ ನೆನಪಾಗಿಲ್ಲ!
ಮೊನ್ನೆ ಯಲ್ಲಾಪುರದ ರೆಸಾರ್ಟವೊಂದರಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ತರಬೇತಿ ನೆಪದಲ್ಲಿ ಅಧಿಕಾರಿಗಳ ಆಟ-ಊಟ ನಡೆದಿದೆ. ಅದಾದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧಿಕಾರಿ-ಸಿಬ್ಬಂದಿ ಪರಸ್ಪರ ಪ್ರಶಸ್ತಿ-ಸನ್ಮಾನ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಕೊನೆಗೆ `ಅವರು ಇವರಿಗೆ ಪ್ರಶಸ್ತಿ ನೀಡಿದರು. ಇವರು ಅವರಿಗೆ ಪ್ರಶಸ್ತಿ ನೀಡಿದರು’ ಎಂಬ ಭಾಷಣ ಮಾಡಿ ಕಾರ್ಯಕ್ರಮ ಮುಗಿಸಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಹೆಸರಿನ ಜೋತೆ ಲಾಂಚನವೂ ಇದ್ದು, ಕಾರ್ಯಕ್ರಮದ ಎಲ್ಲಾ ವೆಚ್ಚವನ್ನು ಸರ್ಕಾರಿ ನೆರವಿನಿಂದ ಯೋಜನೆ ಅನುಷ್ಠಾನ ಮಾಡಿದ ಸ್ವಯಂ ಸೇವಾ ಸಂಸ್ಥೆಯ ತಲೆಗೆ ಕಟ್ಟಿದ್ದಾರೆ.




