ಶಿರಸಿಯ ಹೆಬ್ಬಲಸು ಬಳಿ ಬಾಂದಾರ್ ಹಾಗೂ ಸೇತುವೆ ನಿರ್ಮಾಣ ಕೆಲಸ ಜೋರಾಗಿ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ `ಇಲ್ಲಿ ಕೆಲಸವೇ ನಡೆಯುತ್ತಿಲ್ಲ’ ಎಂದು ಲಿಖಿತವಾಗಿ ಉತ್ತರಿಸಿದ್ದಾರೆ!
2020-21ರ ಸಾಲಿನಲ್ಲಿ ಬಾಂದಾರ್ ಹಾಗೂ ಸೇತುವೆ ನಿರ್ಮಾಣಕ್ಕೆ 2 ಕೋಟಿ ರೂ ಹಣ ಮಂಜೂರಿಯಾಗಿತ್ತು. ಆದರೆ, ಪರಿಸರ ಸೂಕ್ಷ ವಲಯದಲ್ಲಿ ಯೋಜನೆ ರೂಪಿಸಲು ಅಗತ್ಯ ಅನುಮತಿ ಪಡೆದಿರಲಿಲ್ಲ. `ಇಲ್ಲಿನ ಭೂಮಿ ಮೊದಲೇ ಜೌಳು ಪ್ರದೇಶ. ಹೀಗಾಗಿ ಇಲ್ಲಿ ಬಾಂದಾರ್ ನಿರ್ಮಿಸಿ ನೀರು ನಿಲ್ಲಿಸುವುದು ಬೇಡ’ ಎಂದು ಸ್ಥಳೀಯರು ಹೇಳಿದ್ದರು. `ನೀರು ನಿಲ್ಲಿಸಿದರೆ ಸುತ್ತಲಿನ ಕೃಷಿ ಭೂಮಿ ಇನ್ನಷ್ಟು ಜೌಳು ಕಾರುತ್ತದೆ’ ಎಂದು ಆತಂಕವ್ಯಕ್ತಪಡಿಸಿದ್ದರು. ಈ ಹಿನ್ನಲೆ ಆ ಅವಧಿಯಲ್ಲಿ ಕಾಮಗಾರಿ ಮುಂದುವರೆದಿರಲಿಲ್ಲ.
ಆದರೆ, ಈಚೆಗೆ ಹೊಳೆ ಅಂಚಿನ ಪ್ರದೇಶದಲ್ಲಿ ಜೆಸಿಬಿ-ಹಿಟಾಚಿಗಳ ಸದ್ದು ಜೋರಾಗಿ ಕೇಳಿಬರುತ್ತಿದೆ. `ಬಾಂದಾರ್ ಹಾಗೂ ಸೇತುವೆ ಕಾಮಗಾರಿಯೇ ನಡೆಯುತ್ತಿರಬಹುದು’ ಎಂದು ಅಂದಾಜಿಸಿ ಊರಿನವರು ಅಧಿಕಾರಿಗಳನ್ನು ಪ್ರಶ್ನಿಸಿದರೆ `ಅಂಥಹ ಯಾವುದೇ ಕೆಲಸ ನಡೆಯುತ್ತಿಲ್ಲ’ ಎಂದಿದ್ದಾರೆ. ಇದಕ್ಕೆ ಸಮಾಧಾನವಾಗದ ಜನ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದಾಗಲೂ `ದಾಖಲೆ ಲಭ್ಯವಿಲ್ಲ.. ಕಾಮಗಾರಿ ಪ್ರಾರಂಭಿಸಿಲ್ಲ’ ಎಂದು ಬರೆದುಕೊಟ್ಟಿದ್ದಾರೆ!
ಮೊದಲು ಅಡಕ ಕಾಯಿಜಡ್ಡಿ ಗ್ರಾಮದಲ್ಲಿ ಬಾಂದಾರು ನಿರ್ಮಿಸಲು ಉದ್ದೇಶಿಸಲಾಗಿತ್ತು. ಮಳೆಗಾಲದಲ್ಲಿ ಅಘನಾಶಿನಿ ನದಿಯ ಈ ಉಪ ನದಿ ಉಕ್ಕಿ ಹರಿಯುವುದರಿಂದ ಕೃಷಿ ಭೂಮಿಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಹೀಗಾಗಿ ಜನರು ವಿರೋಧ ವ್ಯಕ್ತಪಡಿಸಿದ್ದು, ಯೋಜನೆಯನ್ನು ಸರ್ಕಾರ ಕೈ ಬಿಟ್ಟಿತ್ತು. ಇದೀಗ ಈಗ ಜಾಗ ಬದಲಿಸಿ ಹೆಬ್ಬಲಸಿನ ಬಳಿ ನಿರ್ಮಿಸಲು ಉದ್ದೇಶಿಸಿದ್ದು, ಇಲ್ಲಿ ಇನ್ನೂ ಹೆಚ್ಚಿನ ಹಾನಿ ಆಗುವ ಸಾಧ್ಯತೆಗಳಿದೆ ಎಂಬುದು ಅಲ್ಲಿನವರ ಆಕ್ಷೇಪ.
`ಬಾಂದಾರು ನಿರ್ಮಾಣದ ಸಲುವಾಗಿ ಮರಗಳ ಕಡಿತ ನಡೆಯುತ್ತಿದೆ. ಅವೈಜ್ಞಾನಿಕ ಕೆಲಸಕ್ಕಾಗಿ ಪರಿಸರ ಹಾಳು ಮಾಡಲಾಗುತ್ತಿದೆ’ ಎಂದು ಊರಿನವರು ದೂರಿದ್ದಾರೆ. `ಹೊಳೆಯಲ್ಲಿ ನೆರೆ ಬಂದಾಗ ಮನೆ-ತೋಟಗಳಿಗೆ ನೀರು ನುಗ್ಗುತ್ತದೆ. ಬಾಂದಾರು ನಿರ್ಮಾಣದಿಂದ ಹಲವರು ಮಾಲ್ಕಿ ಜಾಗಗಳಿಗೂ ನೀರು ಬರುತ್ತದೆ’ ಎಂದು ಅಲ್ಲಿನವರು ಅಳಲು ತೋಡಿಕೊಂಡಿದ್ದಾರೆ.
ಆದರೆ, ಇದಕ್ಕೆ ವಿರುದ್ಧವಾಗಿ ಬಾಂದಾರ್ ಹಾಗೂ ಸೇತುವೆ ಅಗತ್ಯ ಎನ್ನುವವರು ಈ ಭಾಗದಲ್ಲಿದ್ದಾರೆ. `ಬಾಂದಾರ್ ನಿರ್ಮಾಣದಿಂದ ನೆಗ್ಗು ಹಾಗೂ ಜಾನ್ಮನೆ ಗ್ರಾಮ ಪಂಚಾಯತ ಸಂಪರ್ಕ ಜೋಡಣೆ ಆಗಲಿದೆ. ರೇವಣಕಟ್ಟಾ ಭಾಗದ ಜನ ಹೇರೂರು ರಸ್ತೆ ಸಂಪರ್ಕ ಪಡೆಯಲು ಅಮ್ಮಿನಳ್ಳಿ ಕೊಳಗಿಬೀಸ್ ಮೂಲಕ ತೆರಳುವುದು ತಪ್ಪುತ್ತದೆ. ಇದರಿಂದ 10ಕಿಮೀ ಪ್ರಯಾಣ ಕಡಿಮೆ ಆಗಲಿದೆ’ ಎಂಬುದು ಇನ್ನೂ ಕೆಲವರ ಅಭಿಪ್ರಾಯ.
`ಬಾಂದಾರ್ ನಿರ್ಮಾಣದಿಂದ ಕೃಷಿ ಭೂಮಿಗಳಿಗೆ ನೀರು ನುಗ್ಗುತ್ತದೆ’ ಎಂದು ಕೆಲವರು ಹೇಳಿದರೆ, `ಬಾಂದಾರ್ ನಿರ್ಮಾಣದಿಂದ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಸಿಗುತ್ತದೆ’ ಎಂದು ಇನ್ನು ಕೆಲವರು ವಾದಿಸುತ್ತಾರೆ. `ಇಲ್ಲಿ ಕೇವಲ 4 ಮೀಟರ್ ಬಾಂದಾರು ನಿರ್ಮಿಸಲಾಗುತ್ತಿದ್ದು, 15 ಮೀಟರ್ ಎತ್ತರದವರೆಗೆ ನೀರು ನಿಲ್ಲಿಸಲಾಗುತ್ತಿದೆ. ಮುಂದಿನ 2 ತಿಂಗಳೊಳಗೆ ಕಾಮಗಾರಿ ಪೂರ್ಣವಾಗಲಿದೆ’ ಎಂಬುದು ಅಧಿಕಾರಿಗಳ ಮಾತು. ಆದರೆ, ಕಾಮಗಾರಿ ನಡೆಯುತ್ತಿಲ್ಲ. ದಾಖಲೆ ಲಭ್ಯವಿಲ್ಲ’ ಎಂದು ಲಿಖಿತವಾಗಿ ತಿಳಿಸಿದ ಬಗ್ಗೆ ಪ್ರಶ್ನಿಸಿದರೆ ಅದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ!





