ಕಂದಾಯ ಭೂಮಿ ಹೊಂದಿದ ಅರಣ್ಯ ಅತಿಕ್ರಮಣದಾರರು ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರೆ ಅಂಥವರ ಅರ್ಜಿ ಕೈ ಬಿಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೇ ಟಿಪ್ಪಣಿ ಹೊರಡಿಸಿದ್ದಾರೆ. `ಅರಣ್ಯ ಸಚಿವರ ಈ ಟಿಪ್ಪಣಿಗೆ ಬೆಲೆ ಇಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಶಿರಸಿಯ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಕಚೇರಿಯಲ್ಲಿ ಟಿಪ್ಪಣಿ ಕುರಿತು ಚರ್ಚಿಸಿದ ರವೀಂದ್ರ ನಾಯ್ಕ `ಈ ಟಿಪ್ಪಣೆಗೆ ಕಾನೂನು ಮಾನ್ಯತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಸಚಿವರೇ ಕಾನೂನುಬಾಹಿರ ಟಿಪ್ಪಣಿ ಹೊರಡಿಸಿರುವುದಕ್ಕೆ ಆಕ್ರೋಶವ್ಯಕ್ತಪಡಿಸಿದರು.
`ಕಾನೂನಿಗೆ ಸಂಬoಧಿಸಿ ನಿಯಮ ರಚಿಸುವುದು ಕೇಂದ್ರ ಸರ್ಕಾರಕ್ಕೆ ಮಾತ್ರ ಅವಕಾಶವಿದೆ. ನಿಮಾವಳಿ ಮತ್ತು ಸೂಚನೆ, ಮಾರ್ಗದರ್ಶನ ನೀಡುವ ಅರಣ್ಯ ಹಕ್ಕು ಕಾಯಿದೆಯಲ್ಲಿ ರಾಜ್ಯ ಮಟ್ಟದ ಮೇಲ್ವಿಚಾರಣಾ 10 ಸದಸ್ಯರ ಸಮಿತಿಯಲ್ಲಿ ಅರಣ್ಯ ಅಧಿಕಾರಿ ಸದಸ್ಯರು ಮಾತ್ರ. ಹೀಗಿರುವಾಗ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಏಕಾಏಕಿ ಟಿಪ್ಪಣಿ ಹೊರಡಿಸಲು ಅರಣ್ಯ ಸಚಿವರಿಗೆ ಅವಕಾಶವಿಲ್ಲ’ ಎಂದವರು ಹೇಳಿದ್ದಾರೆ.
ಸಚಿವರ ವಿರುದ್ಧ ಮುಖ್ಯಮಂತ್ರಿಗೆ ದೂರು
`ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿ, ಕಂದಾಯ ಭೂಮಿ ಹೊಂದಲ್ಲಿ ಅರಣ್ಯವಾಸಿ ಅರಣ್ಯ ಭೂಮಿಯ ಮೇಲೆ ಅವಲಂಬಿತನಾಗಿರುವ ಕುರಿತು ದೃಡೀಕರಿಸಬೇಕು. ಗ್ರಾಮ ಸಭೆಯಲ್ಲಿ ಪ್ರಾಥಮಿಕ ಅವಲಂಭನೆ ದೃಢೀಕರಣಗೊಂಡಲ್ಲಿ ಕಂದಾಯ ಭೂಮಿ ಹೊಂದಿರುವವರುಸಹಿತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗೂವಳಿ ಹಕ್ಕಿಗೆ ಅರಣ್ಯವಾಸಿ ಅರ್ಹನಾಗುವ ಬಗ್ಗೆ ಕೆಂದ್ರ ಬುಡಕಟ್ಟು ಮಂತ್ರಾಲಯ ಮಾರ್ಚ 2010 ಮತ್ತು ಡಿಸೆಂಬರ್ 2008 ರಲ್ಲಿ ಸ್ಪಷ್ಟಿಕರಣ ನೀಡಿದೆ’ ಎಂದವರು ವಿವರಿಸಿದರು. `ಕಾನೂನು ತಿರುಚಿ, ಅರಣ್ಯ ಭೂಮಿ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿರುವ ಅರಣ್ಯ ಸಚಿವರ ಹೇಳಿಕೆಯಿಂದ ಅರಣ್ಯವಾಸಿಗಳಿಗೆ ಗೊಂದಲವಾಗುತ್ತಿದೆ. ಸಚಿವರ ಈ ನಡವಳಿಕೆ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು’ ಎಂದವರು ಹೇಳಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಚಂದ್ರು ನಾಯ್ಕ ಕಂಡ್ರಾಜಿ, ಸುರೇಶ ಮಾದೇವ ಗೊಂದಳ್ಳಿ ಕಂಡ್ರಾಜಿ, ವಿಠ್ಠಲ ಮಾರುತಿ ಹುಣಸಾಳ ಉಪಸ್ಥಿತರಿದ್ದರು.




