ಶಿರಸಿಯಲ್ಲಿ ನೀರಿನ ಪೈಪ್ ಅಳವಡಿಸಲು ವಿವಿಧ ವಾರ್ಡಿನ ರಸ್ತೆ ಅಗೆದ ಬಗ್ಗೆ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆದ ಸಭೆಯಲ್ಲಿ ಈ ವಿಷಯವಾಗಿ ಭಾರೀ ಪ್ರಮಾಣದ ಚರ್ಚೆ ನಡೆದಿದ್ದು, ಅಧಿಕಾರಿಗಳು ಕೊನೆಗೂ ಸೂಕ್ತ ಉತ್ತರ ನೀಡಲಿಲ್ಲ.
ನಗರಸಭೆ ಸದಸ್ಯ ಫ್ರಾನ್ಸಿಸ್ ನರೋನಾ, ವೀಣಾ ಶೆಟ್ಟಿ, ಶ್ರೀಕಾಂತ ತಾರಿಬಾಗಿಲು ವಿಷಯ ಪ್ರಸ್ತಾಪಿಸಿದರು. `ನಗರದೆಲ್ಲೆಡೆ ಈಗ ರಸ್ತೆ ಪಕ್ಕ ದೊಡ್ಡ ದೊಡ್ಡ ಮಣ್ಣಿನ ರಾಶಿ ಬೀಳುತ್ತಿವೆ. ಪೈಪ್ ಅಳವಡಿಸಿದ ಬಳಿಕ ಮಣ್ಣನ್ನು ಸಮರ್ಪಕವಾಗಿ ಮುಚ್ಚುವ ಕಾರ್ಯ ನಡೆಸಿಲ್ಲ’ ಎಂದವರು ದೂರಿದರು. `65 ಕೋಟಿ ರೂ ಮೌಲ್ಯದ ಈ ಬೃಹತ್ ಯೋಜನೆಯನ್ನು ಜಲ ಮಂಡಳಿ ಅನುಷ್ಠಾನಗೊಳಿಸುತ್ತಿದೆ. ಈ ಕಾಮಗಾರಿ ಭಾಗವಾಗಿ ನಗರದ 27 ವಾರ್ಡ್ಗಳಲ್ಲಿ ರಸ್ತೆ ಅಗೆದು ಪೈಪ್ ಹಾಕಲಾಗುತ್ತಿದೆ. ಆದರೆ, ರಸ್ತೆ ಅಗೆದ ಮಣ್ಣನ್ನು ಸಮರ್ಪಕವಾಗಿ ಮುಚ್ಚುತ್ತಿಲ್ಲ. ಇದರಿಂದಾಗಿ ಬೈಕ್ ಸವಾರರು ಬೀಳುವ ಸ್ಥಿತಿ ಉಂಟಾಗಿದೆ’ ಎಂಬ ವಿಷಯ ಮುಂದಿಟ್ಟರು.
`ನಗರ ಪ್ರದೇಶದಲ್ಲಿ ಈಗಾಗಲೇ ಕುಡ್ಸೆಂಪ್ ಯೋಜನೆಯಲ್ಲಿ ಕುಡಿಯುವ ನೀರಿನ ಪೈಪ್ಗಳನ್ನು ಅಳವಡಿಸಲಾಗಿತ್ತು. ಬಹುತೇಕ ಕಡೆ ಈ ಪೈಪ್ ಲೈನ್ ಉತ್ತಮವಾಗಿದ್ದರೂ ಹೊಸ ಕಾಮಗಾರಿಗಾಗಿ ಕಿತ್ತು ಹಾಕಲಾಗುತ್ತಿದೆ. ಪೈಪ್ ಲೈನ್ ಸಮರ್ಪಕವಾಗಿ ಮುಚ್ಚಿದ ಬಳಿಕ ಆ ಜಾಗಕ್ಕೆ ನೀರು ಹಾಕಿ ಗಟ್ಟಿಗೊಳಿಸುವ ಕಾರ್ಯವನ್ನು ಗುತ್ತಿಗೆದಾರರು ಮಾಡುತ್ತಿಲ್ಲ’ ಎಂದು ಸದಸ್ಯರು ದೂರಿದರು. ಈ ವೇಳೆ ಮಾತನಾಡಿದ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, `ಜಲ ಮಂಡಳಿ ನಗರಸಭೆಗೆ ಮಾಹಿತಿ ನೀಡದಿದ್ದರೂ ನಗರದ ಹಿತದೃಷ್ಠಿಯಿಂದ ನಾವು ಸಹಕಾರ ನೀಡೋಣ’ ಎಂದು ಆ ಕ್ಷಣಕ್ಕೆ ಸದಸ್ಯರನ್ನು ಸಮಾಧಾನಪಡಿಸಿದರು.




