ಗುಜುರಿ ಆಯ್ದುಕೊಳ್ಳುವ ವಿಷಯವಾಗಿ ಇಬ್ಬರು ವ್ಯಾಪಾರಿಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಶಿರಸಿ ಗೋಸಾವಿಗಲ್ಲಿಯ ಸಾಗರ ಗೋಸಾವಿ (21) ಹಾಗೂ ಯಲ್ಲಾಪುರದ ಗಣಪತಿಗಲ್ಲಿಯಅನೀಲ ಗೋಸಾವಿ (31) ಹೊಡೆದಾಡಿಕೊಂಡಿದ್ದಾರೆ. ಅನೀಲ ಗೋಸಾವಿ ಸದ್ಯ ಶಿರಸಿಯ ಗೋಸಾವಿಗಲ್ಲಿಯಲ್ಲಿಯೇ ವಾಸವಾಗಿದ್ದು, `ಮೊದಲು ಅನೀಲ ಗೋಸಾವಿ ತನ್ನ ಮುಖಕ್ಕೆ ಹೊಡೆದರು’ ಎಂದು ಸಾಗರ ಗೋಸಾವಿ ಪೊಲೀಸ್ ದೂರು ನೀಡಿದ್ದಾರೆ.
ಗುಜುರಿ ಆಯುವ ವಿಷಯವಾಗಿ ಸಾಗರ ಗೋಸಾವಿ ಹಾಗೂ ಅನೀಲ ಗೋಸಾವಿ ನಡುವೆ ಮೊದಲಿನಿಂದಲೂ ವೈಮನಸ್ಸಿತ್ತು. ಇಬ್ಬರ ನಡುವೆ ಪದೇ ಪದೇ ಜಗಳವೂ ನಡೆಯುತ್ತಿತ್ತು. ಗುಜುರಿ ಹೆಕ್ಕುವ ವಿಷಯವಾಗಿಯೇ ಈ ಇಬ್ಬರು ಕಚ್ಚಾಡುತ್ತಿದ್ದರು. ಪರಸ್ಪರ ದ್ವೇಷ-ಸಿಟ್ಟಿನಿಂದ ಇರುತ್ತಿದ್ದರು.
ಹೀಗಿರುವಾಗ ಶುಕ್ರವಾರ ಬೆಳಗ್ಗೆ ಗಣೇಶನಗರದ ಗೋವಾವಿಗಲ್ಲಿಯಲ್ಲಿ ಸಾಗರ ಗೋಸಾವಿ ಸುಮ್ಮನೆ ನಿಂತಿದ್ದಾಗ ಅಲ್ಲಿ ಅನೀಲ ಗೋಸಾವಿ ಜಗಳ ಮಾಡುತ್ತ ಬಂದರು. ಕೈ ಮುಷ್ಠಿಯಿಂದ ಮೂಗಿಗೆ ಗುದ್ದಿದರು. ನೆಲಕ್ಕೆ ಬೀಳಿಸಿ ಎದೆಗೂ ಗುದ್ದಿದರು. ಅಲ್ಲಿ ಬಿದ್ದಿದ್ದ ಕಲ್ಲಿನಿಂದ ಕಾಲು ಮೊಣಕಟ್ಟಿಗೆ ಜಬ್ಬಿ ಗಾಯಗೊಳಿಸಿದರು. ಈ ನೋವು ಸಹಿಸದ ಸಾಗರ ಗೋಸಾವಿ ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.





