ಮೀನುಗಾರಿಕೆ ನಡೆಸಲು ಆಳ ಸಮುದ್ರಕ್ಕೆ ತೆರಳಿದ್ದ ದೋಣಿ ಮುಳುಗಡೆಯಾಗಿದೆ. ಪರಿಣಾಮ ಆ ದೋಣಿಯಲ್ಲಿದ್ದ 60 ಲಕ್ಷ ರೂ ಮೌಲ್ಯದ ಮೀನುಗಳು ಸಮುದ್ರ ಪಾಲಾಗಿದೆ.
ಫೆ 2ರಂದು ಮಲ್ಪೆಯ ಮೀನುಗಾರರು ಉತ್ತರ ಕನ್ನಡ ಜಿಲ್ಲೆಗೆ ಯಾಂತ್ರಿಕೃತ ದೋಣಿ ಮೂಲಕ ಆಗಮಿಸಿದ್ದರು. ಮೂರು ದಿನಗಳ ಕಾಲ ಮೀನುಗಾರಿಕೆ ನಡೆಸಿ ಅವರು ಮರಳುತ್ತಿದ್ದರು. ಭಟ್ಕಳದ ಬಳಿ ದೋಣಿಯ ಅಡಿಭಾಗಕ್ಕೆ ಗಟ್ಟಿಯಾದ ವಸ್ತು ತಾಗಿ ಒಳಭಾಗಕ್ಕೆ ನೀರು ಬರಲು ಶುರುವಾಯಿತು. ನೀರಿನ ಬಾರಕ್ಕೆ ದೋಣಿ ಮುಳುಗಡೆಯಾಯಿತು.
ಒಟ್ಟು ಐದು ಜನ ಮೀನುಗಾರರು ಈ ದೋಣಿಯಲ್ಲಿದ್ದು, ಅವರನ್ನು ಭಟ್ಕಳದ ಸ್ವರ್ಣಗೌರಿ ಎಂಬ ನಾಡದೋಣಿ ಮೀನುಗಾರರು ರಕ್ಷಿಸಿದರು. ನಾಡದೋಣಿಯಲ್ಲಿದ್ದ ರಾಮಾ ಮೊಗೇರ, ಭರತ ಮೊಗೇರ ಅವರು ಮುಳುಗುತ್ತಿದ್ದ ದೋಣಿಯಲ್ಲಿದ್ದವರನ್ನು ತಮ್ಮ ನಾಡದೋಣಿಗೆ ಹತ್ತಿಸಿಕೊಂಡು ದಡಕ್ಕೆ ಮುಟ್ಟಿಸಿದರು.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಅಶ್ವಿನಿ ಸುರೇಶ ಅವರಿಗೆ ಸೇರಿದ ದೋಣಿ ಮುಳುಗಡೆಯಾಗಿದ್ದು, ಹಿಡಿದ ಮೀನುಗಳ ಜೊತೆ ದೋಣಿಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸಮುದ್ರ ಪಾಲಾದವು.




