ಗೋವಾದಿoದ ಮಂಡ್ಯಕ್ಕೆ ಕಾರಿನಲ್ಲಿ ಸರಾಯಿ ಸಾಗಿಸುತ್ತಿದ್ದ ಇಬ್ಬರನ್ನು ಅಂಕೋಲಾ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. `ನಾವು ಇದನ್ನು ದುಡ್ಡು ಕೊಟ್ಟು ತಂದಿದ್ದೇವೆ. ಅಕ್ರಮ ಅಲ್ಲ’ ಎಂದು ವಾದಿಸಿದರೂ ಪೊಲೀಸರು ಅವರನ್ನು ಬಿಟ್ಟಿಲ್ಲ!
ಗೋವಾ ಸರಾಯಿಯನ್ನು ಕರ್ನಾಟಕಕ್ಕೆ ತರುವುದು ಅಪರಾಧ ಎಂಬ ಅರಿವು ಮಂಡ್ಯದ ಸ್ನೇಹಿತರಿಗೆ ಇರಲಿಲ್ಲ. ಹೀಗಾಗಿ ಗೋವಾ ಪ್ರವಾಸಕ್ಕೆ ಹೋಗಿದ್ದ ಅವರು ಸ್ನೇಹಿತರ ಒತ್ತಾಯದ ಮೇರೆಗೆ ಕಾರಿನ ತುಂಬ ಮದ್ಯದ ಬಾಟಲಿ ಹಾಕಿಕೊಂಡು ಊರ ಕಡೆ ಹೊರಟಿದ್ದರು. ಗಡಿಭಾಗದಲ್ಲಿ ಅವರನ್ನು ಯಾರು ಹಿಡಿದಿರಲಿಲ್ಲ. ಆದರೆ, ಅಂಕೋಲಾ ಪೊಲೀಸರು ಅವರನ್ನು ಕೊನೆಗೂ ಬಿಡಲೇ ಇಲ್ಲ!
ಮಂಡ್ಯದ ದಿವಾಕರ ಈರಯ್ಯ, ಮಾದೇವ ಕೆ ಗೋವಾ ಪ್ರವಾಸ ಮಾಡಿದರು. ಅವರ ಸ್ನೇಹಿತರಾದ ಆಕಾಶ ಹಾಗೂ ಸಂತೋಷ ಸೇರಿ ಅಲ್ಲಿಂದ ಸರಾಯಿ ತರುವಂತೆ ಫುಸಲಾಯಿಸಿದ್ದರು. ಹೀಗಾಗಿ ಮರಳುವಾಗ ಕಾರಿನಲ್ಲಿ 80 ಸಾವಿರ ರೂ ಮೌಲ್ಯದ ಬಗೆ ಬಗೆಯ ಮದ್ಯಗಳನ್ನು ತುಂಬಿಕೊoಡರು. ರಾಜಾರೋಷವಾಗಿ ಹೆದ್ದಾರಿ ಮೂಲಕವೇ ಅದನ್ನು ಗಡಿ ದಾಡಿಸಿದರು. ಶುಕ್ರವಾರ ನಸುಕಿನ 5 ಗಂಟೆ ಅವಧಿಯಲ್ಲಿ ಪೊಲೀಸರು ಅವರ ಕಾರಿಗೆ ಅಡ್ಡಲಾಗಿ ಕೈ ಮಾಡಿದರು.
ತಪಾಸಣೆ ನಡೆಸಿದ ಪೊಲೀಸರು ಸರಾಯಿ ಬಾಟಲಿಗಳನ್ನು ವಶಕ್ಕೆ ಪಡೆದು, ಫೋನ್ ಮೂಲಕ ಸರಾಯಿ ತರಲು ಸೂಚಿಸಿದ ಆಕಾಶ, ಸಂತೋಷ ಜೊತೆ ದಿವಾಕರ ಈರಯ್ಯ, ಮಾದೇವ ಕೆ ವಿರುದ್ಧವೂ ಪ್ರಕರಣ ದಾಖಲಿಸಿದರು. ಇನ್ನೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಂತೋಷ ಪೊಲೀಸ್ ಸಿಬ್ಬಂದಿ ಎಂಬ ಮಾಹಿತಿಯಿದ್ದು, ಈ ಹಿಂದೆ ಸಹ ಅಕ್ರಮ ಮದ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದ. ಸದ್ಯ ಮಂಡ್ಯದ ಜನರ ಬಳಿ ಮದ್ಯ ತರಿಸಿಕೊಂಡು ಆತ ಇನ್ನೊಂದು ಪ್ರಕರಣವನ್ನು ಮೈಮೇಲೆಳೆದುಕೊಂಡಿದ್ದಾನೆ.




